ಬಸವಣ್ಣರ ವಚನ

ಮೇ 20, 2011
ಬಸವಣ್ಣರ ವಚನದ ಪದಕ್ಕೆ ಬೇರೆ ಅರ್ಥ
 ಓ.ಎಲ್.ನಾಗಭೂಷಣಸ್ವಾಮಿಯವರು ತಮ್ಮ "ವಚನಸಾವಿರ" ಕೃತಿಯಲ್ಲಿ ಹೀಗೆ ಹೇಳಿದ್ದಾರೆ-"ಅರ್ಥ ಗೊತ್ತಿದೆ,
 ಸುಸ್ಪಷ್ಟವಾಗಿದೆ ಎಂದೇ ಭಾವಿಸಿ ನಾವು ವಚನಗಳು ಒಳಗೊಂಡಿರುವ ಅನುಭವಕ್ಕೆ ಮುಚ್ಚಿದ
 ಮನಸ್ಸಿನವರಾಗಿಬಿಡುತ್ತೇವೆ.ಪರಿಚಿತವಾದದ್ದನ್ನೂ ಅಪರಿಚಿತಗೊಳಿಸಿಕೊಳ್ಳದ ಹೊರತು ಓದಿನ ಹೊಸತನ 
ಸಾಧ್ಯವಾಗುವುದಿಲ್ಲ"(ಪು.೯-೧೦). ನಿಜವಾದ ಮಾತು ಇದು.
 ನಾನಿಲ್ಲಿ ಹೇಳಬೇಕೆಂದಿರುವ ವಚನದಲ್ಲಿ ಇಡೀ ವಚನದ ಅರ್ಥವೇನೂ ಅಂಥ ಬದಲಾವಣೆಗೊಳ್ಳುವುದಿಲ್ಲ.
ಆದರೆ ಶಬ್ದವೊಂದರ ಅರ್ಥ ಮಾತ್ರ , ಈವರೆಗೆ ವ್ಯಾಖ್ಯಾನಿಸಿರುವುದಕ್ಕಿಂತ ಬೇರೆ ಅನ್ನಿಸಿದೆ.
ಇದು ತುಂಬ ಪ್ರಸಿದ್ಧ ವಚನ. ಅನೇಕರು ಬೇರೆ ಬೇರೆ ಕಡೆ ಉದ್ಧರಿಸಿದ ವಚನ. ಬಸವಣ್ಣನವರ ವಚನ ಹೀಗಿದೆ.
    ಮೇಲಾಗಲೊಲ್ಲೆನು ಕೀಳಾಗಲೊಲ್ಲದೆ
    ಕೀಳಿಂಗಲ್ಲದೆ ಹಯನು ಕರೆವುದೆ
    ಮೇಲಾಗಿ ನರಕದೊಳೋಲಾಡಲಾರೆನು
    ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
    ಮಹಾದಾನಿ ಕೂಡಲಸಂಗಮದೇವಾ
 ಹೀಗೆ ಕೀಳಿಂಗಲ್ಲದೆ ಹಯನು ಕರೆಯದು ಎಂದು ದಾಸಿಮಯ್ಯನ ವಚನದಲ್ಲೂ ಬರುತ್ತದೆ.(ಪು.೧೩೦ ವಚನಸಾವಿರ)
ಕೀಳು ಅನ್ನುವುದಕ್ಕೆ ಕೆಳಗೆ ಅಂತ ಅರ್ಥ ಹೇಗೂ ಇದೆಯಲ್ಲ. ಪಾದಕ್ಕೆ ಕೀಳಾಗಿರಿಸು ಅನ್ನುವಲ್ಲಿ ಕೇಳಗೆ ಅನ್ನುವ
 ಅರ್ಥ ಸುಲಭವಾಗಿ ನಿಲ್ಲುತ್ತದೆ.ಲಥಾ ಮೈಸೂರು ಅವರು ಮೇಲಾಗಲೊಲ್ಲೆನು ಅನ್ನುವ ಪುಸ್ತಕದಲ್ಲಿ "ಕೆಳಗಿದ್ದವರಿಗೆ
 ಮಾತ್ರ ಹಯನು ಕರೆಯಲು ಸಾಧ್ಯ" ಅಂತ ಹೇಳಿದ್ದಾರೆ(ಪು.೫).
  ಕೀಳು ಎಂಬುದಕ್ಕೆ ಆಕಳ ಕರು ಎಂಬರ್ಥವನ್ನು ಎಸ್.ವಿದ್ಯಾಶಂಕರ್ ಕೂಡ ನೀಡಿದ್ದಾರೆ(ವಚನಗಳು,ಪು.೧೬೭).
  ಕೀಳು ಅಂದರೆ ಕೆಳಮಟ್ಟ, ಹಸುವಿನ ಕರು ಅಂತ ಓ.ಎಲ್.ಎನ್. ಅರ್ಥ ನೀಡಿದ್ದಾರೆ(ವಚನಸಾವಿರ ಪು.೩೭೩)
  ಹೀಗೆ ಕೀಳಿಂಗಲ್ಲದೆ ಹಯನು ಕರೆವುದೆ ಅನ್ನುವಲ್ಲಿ ಕೀಳು ಅನ್ನುವುದಕ್ಕೆ ಹಸುವಿನ ಕರು ಅನ್ನುವುದನ್ನೇ ಬಹುತೇಕ
 ಎಲ್ಲರೂ ಹೇಳುತ್ತಾರೆ.
 ನನಗೆ ಹಾಗನ್ನಿಸುವುದಿಲ್ಲ.ಇಲ್ಲಿ ಕೀಳು ಅಂದರೆ ಹಸುವನ್ನು ಕಟ್ಟಿದ ಹಗ್ಗ ಇರಬೇಕು.
 ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಲೋಹಿತಾಶ್ವನ ಬಗ್ಗೆ ಹೇಳುವಾಗ "ಕೀಳಿಲೊಳು ಕಟ್ಟುವಾಗ" ಅಂತ
 ಬರುತ್ತದೆ. ಇದಕ್ಕಿಂತ ಮುಖ್ಯವಾಗಿ ಪಂಪರಾಮಾಯಣದಲ್ಲಿ "ಕೀಳನಳವಡೆ ಹಿಡಿದು" ಎಂದು ಬರುತ್ತದೆ.
(ಇಲ್ಲಿ ಕೀಳು ಅನ್ನುವಲ್ಲಿ ಹಳೆಗನ್ನಡದಲ್ಲಿ ಬರುವ ರಳ  ಇರಬಹುದು,ನನಗೆ ಅದನ್ನು ಟೈಪುಮಾಡಲು ಗೊತ್ತಿಲ್ಲ.) 
ಇದು ಕುದುರೆಯ ಕಡಿವಾಣದ ಬಗ್ಗೆ ಇರುವುದು. ಪಂಪರಾಮಾಯಣ ಮತ್ತು ಹರಿಶ್ಚಂದ್ರ ಕಾವ್ಯಗಳು ಬಸವಣ್ಣರ
 ಆಸುಪಾಸಿನ ಕಾಲದವು ಎಂಬುದನ್ನು ಗಮನಿಸಬೇಕು.
 ಬಸವಣ್ಣ ಬೇರೆಡೆ ಕರುವನ್ನು ಕರು ಎಂದೇ ಕರೆದದ್ದುಂಟು. ಉದಾ; ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ.
 ತುರುಗಾಹಿ ರಾಮಣ್ಣನ ವಚನದಲ್ಲಿ "ಕರುವಿಗೆ ಮೂರು ಹಣ" ಅಂತ ಬರುತ್ತದೆ.
ಎಳೆಗರು ಎಂಬ ಪದ ಅಕ್ಕ ನಾಗಮ್ಮನ ವಚನದಲ್ಲಿ ಬರುತ್ತದೆ.
  ಹಾಗಾದರೆ ಬಸವಣ್ಣ ಕೀಳಿಂಗಲ್ಲದೆ ಎಂದದ್ದು ಯಾಕೆ? ಅದನ್ನು ಬೇರೆ ಹೇಗೆ ವ್ಯಾಖ್ಯಾನಿಸುವುದು? 
ಅದು ವಾಸ್ತವವಾಗಿ ಬಸವಣ್ಣರ ಶಬ್ದ ಚಮತ್ಕಾರಕ್ಕೆ ಒಂದು ಉದಾಹರಣೆ.
 ವಚನಗಳ ಭಾಷೆ ರೂಪಕದ್ದು .ಹಾಗೆಯೇ ಅಲ್ಲಿ ಶಬ್ದ ಚಮತ್ಕಾರ ಅಪರೂಪವೇನಲ್ಲ.
 "ಕೀಳು"ವಿಗೆ ಕರು ಎಂದರ್ಥ ಮಾಡಿದರೂ ಅದು ಶಬ್ದಚಮತ್ಕಾರವೇ ಹೌದು.  
ಇಂಥದ್ದು ಬಸವಣ್ಣರಲ್ಲಿ ಬೇಕಾದಷ್ಟಿವೆ.
ಉದಾ; ಬಿದಿರಲಂದಣವಕ್ಕು
         ಬಿದಿರೆ ಸತ್ತಿಗೆಯಕ್ಕು
         ಬಿದಿರಲ್ಲಿ ಗುಡಿ
         ಬಿದಿರದವರ ಮೆಚ್ಚ
         ಕೂಡಲಸಂಗಮದೇವ
  ಹಾಗೆಯೇ, ವಚನದಲ್ಲಿ ನಾಮಾಮೃತ ತುಂಬಿ......
              .....ನಿಮ್ಮ ಚರಣಕಮಲದೊಳಾನು ತುಂಬಿ ಇತ್ಯಾದಿ.
      ಕೀಳು ಅನ್ನುವುದನ್ನು ಕರು ಎಂದಿಟ್ಟುಕೊಂಡರೂ ಹಗ್ಗ ಎಂದಿಟ್ಟುಕೊಂಡರೂ ಇಡಿಯಾಗಿ ವಚನದ
 ಅರ್ಥದಲ್ಲಿ ಅಂಥ ವ್ಯತ್ಯಾಸವೇನೂ ಆಗೋದಿಲ್ಲ. ಎರಡು ಸಂದರ್ಭಗಳಲ್ಲೂ ಅದು ಕೇವಲ ಶಬ್ದಚಮತ್ಕಾರವೇ .
 ಎರಡು ಸಂದರ್ಭಗಳಲ್ಲು ಫೇಕ್ಚುವಲ್ ಆಗಿ ಸರಿಯೇ, ಯಾಕೆಂದರೆ ಹಗ್ಗದಲ್ಲಿ ಕಟ್ಟದೆ ಹಾಲು ಕರೆಯಲು ಸಾಧ್ಯವಿಲ್ಲ.
 ಕರು ಬಿಡದೆ ಹಸು  ಹಾಲು ಸೊರೆಸುವುದಿಲ್ಲ.
(ಇದು ಹಿಂದಿನ ಕಾಟು ದನಗಳ ಬಗ್ಗೆ,ಅಂದರೆ ಊರ ದನಗಳು- ಈಚಿನ ಹೊಸ ತಳಿಗಳಿಗೆ ಕರುವೂ ಬೇಡ 
 ಹೋರಿಯೂ ಬೇಡ ಬಿಡಿ.).  ಆದರೆ ಕೀಳು ಎಂಬ ಪದ ಹಳೆ ಸಾಹಿತ್ಯದಲ್ಲಿ ಬೇರೆಲ್ಲಾದರೂ ಕರು 
ಎಂಬ ಅರ್ಥದಲ್ಲಿ ಬಳಕೆಯಾಗಿದೆಯೇ? ಇಲ್ಲ ಎಂದು ಖಡಾ ಖಂಡಿತ ಹೇಳುವಷ್ಟು ನಾನು ಓದಿಲ್ಲ.
 ಯಾರಾದರೂ ಗೊತ್ತಿದ್ದರೆ ದಯವಿಟ್ಟು ಹೇಳಬೇಕು.

ಕೊನೆಬೆಡಿ: ಸೀರೆ ಹೆಚ್ಚು ಭಾರವಿದ್ದಷ್ಟೂ ಬೆಲೆ ಜಾಸ್ತಿ. ಭಾರ ಗೊತ್ತಾಗಬೇಕಾದರೆ ಎತ್ತಿಯೇ
            ನೋಡಬೇಕಷ್ಟೆ.

ಒಬಾಮಾ-ಒಸಾಮಾ

ಮೇ 4, 2011
ಒಸಾಮಾ-ಒಬಾಮಾ 

        ಅಂತೂ ಅಮೆರಿಕ ಒಸಾಮಾನನ್ನು ಕೊಂದಿದೆ ಅನ್ನುವುದನ್ನು ಅದು ಅಧಿಕೃತವಾಗಿ 
ಘೋಷಿಸಿದೆ.
    ಹೀಗೆ ಕೊಲ್ಲುವುದು ಅಮೆರಿಕಕ್ಕೆ ಏನೂ ಕಷ್ಟದ ಸಂಗತಿಯಲ್ಲ. ಅದು ಅದನ್ನು ದಕ್ಕಿಸಿಕೊಳ್ಳಬಲ್ಲುದು.
 ಆದರೆ ಹಲವು ಪ್ರಶ್ನೆಗಳು ಎಲ್ಲರ ಮನಸ್ಸಲ್ಲೂ ಏಳುವುದು ಸಹಜ. ಕೆಲದಿನಗಳಾದ ನಂತರ ಆ 
ಪ್ರಶ್ನೆಗಳನ್ನು ಎಲ್ಲರೂ ಮರೆಯುತ್ತಾರೆ ಅನ್ನೋದು ಕೂಡ ನಮಗೆಲ್ಲ ಗೊತ್ತು . 
ನಾವು ಕೂಡ ಮರೀತೇವೆ. ಹಾಗೆ ಮರೆಯುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯ. 
ಆದರೂ ಈಗ ಮನಸಲ್ಲಿ ಬಂದ ಆಲೋಚನೆಗಳಲ್ಲಿ ಕೆಲವನ್ನು ಮರುನೆನೆದುಕೊಳ್ಳುತ್ತೇನೆ. 
ಇವು ನನ್ನ ಮನಸಲ್ಲಿ ಮಾತ್ರ ಬಂದ ಪ್ರಶ್ನೆಗಳಲ್ಲವಾದ್ದರಿಂದ ಈ ಪ್ರಶ್ನೆಗಳ ಬಗ್ಗೆ ನಾನು
 ಯಾವುದೇ ಕಾಪಿರೈಟ್ ಕ್ಲೇಮು ಮಾಡುವುದಿಲ್ಲ!!!
       ನೋಡಿ,ಇದು ಅನ್ಯಾಯವಲ್ಲವೇ? ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಕೊಲ್ಲುವುದುನ್ಯಾಯವೇ?
  ಆಧುನಿಕ ನ್ಯಾಯಶಾಸ್ತ್ರದಲ್ಲಿ ಎಲ್ಲಾದರೂ ವಿಚಾರಣೆಯಿಲ್ಲದೆ ಹೀಗೆ ಶಿಕ್ಷೆ ನೀಡುವುದನ್ನು 
ಸಮರ್ಥಿಸಲಾಗಿದೆಯೇ?  ಲಾಡೆನ್ ಗೆ ಫೇರ್ ಟ್ರಯಲ್ ನೀಡಲಾಗಿಲ್ಲ.
 ಅವನನ್ನು ಯಾವ ಕೋರ್ಟಿನಲ್ಲಿ ವಿಚಾರಣೆ ಮಾಡಲಾಗಿದೆ? ತಾನು ಕೊಲೆ ಮಾಡಿದ್ದೇನೆ ಅಂತ ಒಬ್ಬ
 ವ್ಯಕ್ತಿ ಹೇಳಿದ ಕೂಡಲೇ ಯಾವ ಕೋರ್ಟು ಕೂಡ ವಿಚಾರಣೆಯಿಲ್ಲದೆ  ಆ ವ್ಯಕ್ತಿಯನ್ನು ಗಲ್ಲಿಗೆ 
ಹಾಕುವುದಿಲ್ಲ. ಹಾಗಿರುವಾಗ ,ಅಮೆರಿಕವಿರಬಹುದು ಅಥವಾ ಅದರಪ್ಪನಿರಬಹುದು, ಕಾನೂನನ್ನು ಕೈಗೆ
 ತೆಗೆದುಕೊಳ್ಳುವುದೆಂದರೇನು? ಓಯ್!! ಅಮ್ನೆಸ್ಟಿ ಇಂಟರ್ ನ್ಯಾಷನಲ್ ಅನ್ನುವ ಸಂಸ್ಥೆಯವರೇ!!!
ಎಲ್ಲಿದ್ದೀರಿ? ಒಸಾಮಾನ ಮಾನವ ಹಕ್ಕಿಗೆ ಬೆಲೆ ಇಲ್ಲವೇ???
     ಹೋಗಲಿ , ಒಸಾಮಾ ಅಪರಾಧಿ ಅಂತಲೇ ಇಟ್ಟುಕೊಳ್ಳೋಣ. ಆದರೆ, ಅವನ ಜತೆಗೆ
 ಮನೆಯಲ್ಲಿದ್ದ ಇತರರು ಏನು  ಅಪರಾಧ ಮಾಡಿದ್ದಾರೆ? ಅವನ ಹೆಂಡತಿ ಮಕ್ಕಳ ಮೇಲೂ ಅಮೆರಿಕ
 ಕರುಣೆ ತೋರಲಿಲ್ಲ. ಅವರೇನಾದರೂ ಕೊಲೆ ಮಾಡಿದ್ದಕ್ಕೆ ಆಧಾರಗಳಿವೆಯೆ? 
ಅವರನ್ನು ಯಾವ ಕೋರ್ಟಲ್ಲಾದರೂ ವಿಚಾರಣೆ ನಡೆಸಲಾಗಿದೆಯೇ? 
ಒಸಾಮಾನ ಮಕ್ಕಳು ಅನಾಥರಾಗಲಿಲ್ಲವೇ? ಆ ಮುಗ್ಧರ ಪರವಾಗಿ ಯಾಕೆ ಅಂತಾರಾಷ್ಟ್ರೀಯ ಮಾನವ
 ಹಕ್ಕುಗಳ ಸಂಸ್ಥೆಗಳು ಹೋರಾಡುತ್ತಿಲ್ಲ? ಕನಿಷ್ಟ ನಮ್ಮ ದೇಶದ ಅಥವಾ ರಾಜ್ಯದ ಸಾಹಿತಿಗಳು,
ಬುದ್ಧಿಜೀವಿಗಳು ದನಿಯೆತ್ತಬೇಕಾಗಿತ್ತಲ್ಲ? ಸತ್ಯ ಶೋಧನಾ ಸಮಿತಿಗಳು ಯಾಕೆ ಹುಟ್ಟಿಲ್ಲ?
 ಕಾರ್ಯ ಪ್ರವೃತ್ತರಾಗಿಲ್ಲ ? ಇದನ್ನೇ ಮಾದರಿಯಾಗಿ  ಇಟ್ಟುಕೊಂಡು ಭಾರತ ಕೂಡ 
ಪಾಕಿಸ್ತಾನದಲ್ಲಿರುವ  ದಾವೂದನ ಮೇಲೆ ದಾಳಿ ಮಾಡಬಹುದು ಅಂತ ಆತಂಕವಾದರೂ ನಮ್ಮ ದೇಶದ
 ಮಾಧ್ಯಮಮಿಂಚುಗರಿಗೆ ಉಂಟಾಗಬೇಕಿತ್ತಲ್ಲವೇ? 

     ಒಸಾಮಾ ಒಂದುವೇಳೆ ಭಯೋತ್ಪಾದಕ ಅಂತ ಆಗಿದ್ದರೂ ಕೂಡ ಆತ ಯಾಕಾಗಿ 
ಭಯೋತ್ಪಾದಕನಾದ? ಅದಕ್ಕೆ ಕಾರಣ ಯಾರು,? ಅದಕ್ಕೆ ಅವನೆಷ್ಟು ಕಾರಣ? ಇತರರೆಷ್ಟು ಕಾರಣ?
 ಅಲ್ಪಸಂಖ್ಯಾತನಾಗಿರುವುದರಿಂದಾಗಿ ಅಭದ್ರತೆಯ ಭಾವನೆಯಿದ್ದುದರಿಂದ  ಆತ ಈ ಕೃತ್ಯಗಳನ್ನು 
ಮಾಡುತ್ತಿದ್ದನೇ?ಎಂಬುದನ್ನೆಲ್ಲ ವಿಚಾರಿಸಬೇಕಿತ್ತಲ್ಲವೇ? ಒಂದು ವೇಳೆ ಆತ ಭಯೋತ್ಪಾದಕ ಅಂತಾಗಿದ್ದರೆ
, ಅದಕ್ಕೆ ಹೊರಗಿನ (external) ಕಾರಣಗಳಿದ್ದರೆ ಅವನ ಅಪರಾಧ ಅಷ್ಟು ಕಡಿಮೆ ತಾನೆ? 
ಆಗ ರೇರೆಸ್ಟ್ ಆಫ್ ರೇರ್ ಕೇಸ್ ಗಳಲ್ಲಿ ನೀಡಬೇಕಾದ ಮರಣದಂಡನೆಯಂಥ ಶಿಕ್ಷೆಯನ್ನು 
ವಿಚಾರಣೆಯಿಲ್ಲದೆ ನೀಡಿದ್ದು ಯಾಕೆ?
     ಅಲ್ಲದೆ ,ಒಸಾಮಾಗೆ ಮತಿವಿಕಲತೆ ಇತ್ತು,ಅಥವಾ ಅವನು ಅಪ್ರಾಪ್ತ ವಯಸ್ಕ ಅಂತ ಅವನ
ಕಡೆಯಿಂದ ವಾದಿಸಬಹುದಾದ ವಕೀಲರಿಗೆ ವಾದಿಸಲು ಅವಕಾಶವನ್ನು ಕೊಡಬೇಕಿತ್ತು. 
ಒಂದು ವೇಳೆ, ಅವನು ಅಪ್ರಾಪ್ತ  ವಯಸ್ಕ ಅಂತ ವಕೀಲರು ವಾದಿಸಿದರೆ ಆಗ ಅವನ ಎಸ್ಸೆಸ್ಸೆಲ್ಸಿ 
ಅಂಕಪಟ್ಟಿ ಮೂಲಕ ದೃಢೀಕರಿಸಿಕೊಳ್ಳುವುದು ಕೂಡ ನ್ಯಾಯಾಲಯದ ಕರ್ತವ್ಯವಾಗುತ್ತದೆ. 
ಅಥವಾ ಡಿ. ಎನ್.ಎ. ಪರೀಕ್ಷೆಯೋ ಮತ್ತೊಂದೋ ಪರೀಕ್ಷೆಗಳ ಮೂಲಕ ನೋಡಬೇಕಾಗುತ್ತದೆ. 
ಯಾವ ಪರೀಕ್ಷೆ ಆಗಬೇಕು ಅಂತ ನಾವು ನೀವು ಹೇಳುವಂತಿಲ್ಲ ಬಿಡಿ , ಅದಕ್ಕೆ ಸಂಬಂಧಿಸಿದ,
ಅಧಿಕೃತ ತಜ್ಞರೇ ಕೋರ್ಟಿಗೆ ತಿಳಿಸಬೇಕಾಗುತ್ತೆ. ಮತಿವಿಕಲ ಹೌದೋ ಅಲ್ಲವೋ ಅಂತ ನೋಡಲು
 ಖ್ಯಾತ ಮನೋರೋಗ ತಜ್ಞರನ್ನು ಕರೆಸಬೇಕಾಗುತ್ತಿತ್ತು. ಹಾಗೆ ವಿಚಾರಿಸುತ್ತಿದ್ದರೆ ನಾನು ಜಗತ್ತಿಗೇ 
ಬೆಂಕಿ ಇಡುತ್ತೇನೆ ಅಂತ ಘೋಷಿಸಿಕೊಂಡವನು ಮತಿವಿಕಲ ಅಂತ ಪ್ರಮಾಣಪತ್ರ ನೀಡಲು 
ವೈದ್ಯರಿಗೆ ಕಷ್ಟವೇನೂ ಆಗುತ್ತಿರಲಿಲ್ಲ. ಮತಿವಿಕಲರನ್ನು ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿ 
ಚಿಕಿತ್ಸೆ ಕೊಡಿಸುವ ಬದಲು ಶಿಕ್ಷೆ ನೀಡುವುದು ಯಾವ ನಾಗರಿಕ ಸಮಾಜಕ್ಕೆ ಶೋಭೆ?
   ಕ್ಷಮೆ ಅನ್ನುವುದು ಜಗತ್ತಿನ ದೊಡ್ದ ತತ್ವ ಅಲ್ಲವೇ?  ಎಲ್ಲ ಜಾಗತಿಕ ತತ್ವಜ್ಞರು ಅದನ್ನು ಹೇಳಿದ್ದಾರೆ.
 ಕಸಬನಂಥವರನ್ನು ಗಲ್ಲಿಗೆ ಏರಿಸಬಾರದು , ಅವರನ್ನು ಜೈಲಿನಲ್ಲಿ ಇಡಬೇಕು,
 ಅವರಿಗೆ ರಿಪೆಂಟ್ ಮಾಡಿಕೊಳ್ಳಲು ಅವಕಾಶ ನೀಡಬೇಕು, ಕೊಂದರೆ ಮತ್ತೆ ಅವರಿಗೆ 
ಜ್ಞಾನೋದಯವಾಗಲು ಅವಕಾಶವೆಲ್ಲಿ ಅಂತ ನಮ್ಮ ದೇಶದ ಹಲವು ಮಾಧ್ಯಮಮಿಂಚುಗರು 
ಹೇಳಿದ್ದನ್ನಾದರೂ ಅಮೆರಿಕದ ಗೂಢಚಾರರು  ಟಿ.ವಿ.ಗಳಿಗೆ ಕಿವಿಹಚ್ಚಿ  ಕೇಳಿಲ್ಲವೇ? 
 ಅಮೆರಿಕಕ್ಕೆ ಕನಿಷ್ಟ ಭಾರತವಾದರೂ ಮಾದರಿಯಾಗಬೇಕಿತ್ತು.
 ನಾವು ಕಸಬನಿಗೆ ಎಷ್ಟು ಚೆನ್ನಾಗಿ ಫೇರ್ ಟ್ರಯಲ್ ನೀಡಿದ್ದೇವೆ ಅನ್ನೋದನ್ನಾದರೂ
 ಅವರು ನೋಡಬೇಕಿತ್ತು.ನಮ್ಮದು ಬಡ ದೇಶವಾದರೂ ನಮ್ಮ ನ್ಯಾಯ ಪ್ರಜ್ಞೆ ದೊಡ್ದದು.
 ಅನ್ಯಾಯವಾಗಿ ಕಸಬನೂ ಶಿಕ್ಷೆ ಅನುಭವಿಸಬಾರದು. ಹೀಗಾಗಿ ಕೋಟಿಗಟ್ಟಲೆ ಖರ್ಚಿನೊಂದಿಗೆ , 
ಸರಕಾರವೇ  ವಕೀಲರನ್ನು ನೇಮಿಸಿದೆ.
         ಒಸಾಮಾನ ಹೆಣವನ್ನು ಮುಸ್ಲಿಮ್ ವಿಧಿವಿಧಾನಗಳ ಮೂಲಕ ಸಮುದ್ರದಲ್ಲಿ ದಫನ 
ಮಾಡಲಾಗಿದೆ ಅಂತ ಪತ್ರಿಕೆಗಳಲ್ಲಿ ವರದಿಯಾಗಿದೆ. ಆ ವಿಧಿಗಳನ್ನು ನೆರವೇರಿಸಿದ ಧರ್ಮ ಪಂಡಿತರು 
ಯಾರು? ಹೇಳುವ ಹೊಣೆ ಒಬಾಮನ ಮೇಲಿದೆ. ಅಲ್ಲದೆ ಆಳ ಸಮುದ್ರಕ್ಕೆ ಹೆಣವನ್ನು ಎಸೆದುದನ್ನು
 "ದಫನ" ಎಂದು ಕರೆಯುವುದು ಸರಿಯೇ? ಈ ಶಬ್ದ ಸರಿಯೇ ಅಂತ ತೀರ್ಮಾನಿಸಲು
 ನಿಘಂಟುತಜ್ಞರು ಹಾಗೂ ಧರ್ಮಪಂಡಿತರು ಇರುವ ಪರಿಣತ ಸಮಿತಿಯೊಂದನ್ನು ನೇಮಿಸಬೇಕು.
       ಹೆಣವನ್ನು  ಪೋಸ್ಟ್ ಮಾರ್ಟಮ್ ಮಾಡುವ ಪುರುಸೊತ್ತೂ ಅಮೆರಿಕದವರಿಗೆ ಇರಲಿಲ್ಲ.
 ಅಮೆರಿಕದವರಿಗೆ ಎಲ್ಲ ಅರ್ಜೆಂಟ್. ನಮ್ಮನ್ನು ನೋಡಿ ಅವರು ನ್ಯಾಯದೃಷ್ಟಿ  ಕಲಿಯಬೇಕು. 
ನಾವು ಮುಂಬಯಿ ದಾಳಿಕೋರರ ಹೆಣಗಳನ್ನು ಹಲವುದಿನಗಳ ಕಾಲ ಕಾಪಿಟ್ಟು, ಪಾಕಿಸ್ತಾನದವರಲ್ಲಿ,
 ಒಮ್ಮೆ ಕೊಂಡೋಗಿ ಅಂತ ಬೇಡಿಕೊಳ್ಳಲಿಲ್ಲವೇ? ಬದುಕಿರುವ ಒಸಾಮಾನನ್ನು ದ್ವೇಷಿಸಲಿ, 
ಪಾಪ ಸತ್ತ ಹೆಣದ ಮೇಲೆ ಯಾಕೆ ಕೋಪ?
   ಇದು ಪಾಕಿಸ್ಥಾನದ ಮೇಲಿನ ದಾಳಿ ಅಲ್ಲವೇ? ತನ್ನದು ಮುಸ್ಲಿಮರ ವಿರುದ್ಧ ಹೋರಾಟ ಅಲ್ಲ ,
 ಭಯೋತ್ಪಾದಕರ ವಿರುದ್ಧ ಹೋರಾಟ ಅಂತ ಒಬಾಮಾ ಎಷ್ಟೇ ಹೇಳಿದರೂ ಮುಸ್ಲಿಮ್ ರಾಷ್ಟ್ರವಾದ 
ಪಾಕಿಸ್ತಾನವನ್ನು ಒಂಚೂರೂ ನಂಬದೆ ಅವರ ನೆಲದಲ್ಲೇ ದಾಳಿ ಮಾಡಿದ,ಅದೂ ಕೂಡ
 ಹೇಡಿಯಂತೆ ಮಧ್ಯರಾತ್ರಿ,ಬೆಳಕಿಲ್ಲದಾಗ, ಇದ್ದ ಬೆಳಕನ್ನೂ ಆರಿಸಿ, ದಾಳಿ ಮಾಡಿದ,
 ಪಾಕಿಸ್ತಾನದವರಿಗೆ ಯಾವ ಗುಟ್ಟನ್ನೂ ಹೇಳದ, ಒಬಾಮಾನನ್ನು ಜನಾಂಗ ದ್ವೇಷಿ
 ಅಂತ ನಂಬಲು ಕೂಡ ಜನರಿಗೆ ಸಾಕಷ್ಟು ಕಾರಣಗಳಿವೆ. ಹೀಗಾಗಿ ಮುಂದೆ ಒಬಾಮಾ 
ಏನಾದರೂ ಭಾರತಕ್ಕೆ ಭೇಟಿ ನೀಡಲು ಅಪೇಕ್ಷಿಸಿ ವೀಸಾಕ್ಕೆ ಅರ್ಜಿ ಸಲ್ಲಿಸಿದರೆ ಅವನಿಗೆ ಭಾರತದ
 ವೀಸ ನೀಡಬಾರದು ಅಂತ ನಾವು ಈಗಲೇ ನಮ್ಮವರೇ ಆದ ವಿದೇಶಾಂಗ ಸಚಿವ 
ಎಸ್ಸೆಮ್ ಕೃಷ್ಣರನ್ನು ಒತ್ತಾಯಿಸುವ ಅಗತ್ಯವಿದೆ.ಚುನಾವಣೆ ಲಾಭಕ್ಕಾಗಿ ಒಬಾಮಾ 
ಹೀಗೆ ಮಾಡಿದ್ದಲ್ಲವೇ?
   ಇದು ನಕಲಿ ಎನ್ ಕೌಂಟರ್ ಅಲ್ಲ ಅಂತ ಹೇಳಲು ಹೇಗೆ ಸಾಧ್ಯ? 
ಇದು ಅಸಲಿ ಎನ್ ಕೌಂಟರ್ ಅಂತ ತೋರಿಸಲಿಕ್ಕಾಗಿ ಅಮೆರಿಕದ ಸೀಲ್ ಯೋಧರಲ್ಲಿ 
ಯಾರಾದರೊಬ್ಬ ಒಸಾಮಾನ ಪಿಸ್ತೂಲಿನಿಂದ ತನ್ನ ಎಡ ಕಿರುಬೆರಳ ಬದಿಗೆ ಗುಂಡು
 ಹಾಕಿಕೊಂಡು ಸಾಕ್ಷ್ಯವನ್ನೇನಾದರೂ ತಯಾರಿಸಿಕೊಂಡದ್ದಕ್ಕೆ ಆಧಾರಗಳಿವೆಯೆ?
 ಹಾಗೊಂದು ವೇಳೆ ಇದ್ದರೆ ಅಸಲಿ ಅಂತ ಒಪ್ಪಬಹುದು. 
ಅಲ್ಲದಿದ್ದರೆ ಈವರೆಗೆ ಹೆಸರೇ ಇಲ್ಲದ ಆ ಸೀಲ್ ಯೋಧರ ಮೇಲೆ ಹಾಕಬಹುದಾದ 
ಅಂತಾರಾಷ್ಟ್ರೀಯ  ಕೇಸು ಕಾಯುತ್ತದೆ.
    ಈ ಬರ್ಬರ ಮಾನವ ಹತ್ಯೆಯನ್ನು ಒಬಾಮಾ ಮತ್ತು ಅವನ ಉನ್ನತ ಅಧಿಕಾರಿಗಳು
 ಲೈವ್ ಆಗಿ ಟಿ.ವಿ.ಯಲ್ಲಿ ನೋಡಿದರಂತೆ. ಇದು ಬೇರೆಯವರು ಸ್ಯಾಡ್ ಆಗಿರುವುದನ್ನು 
ನೋಡಲು ಇಷ್ಟ ಪಡುವ  ಸ್ಯಾಡಿಷ್ಟ್ ನೇಚರ್ ಅಲ್ಲವೇ? ಅಮೆರಿಕದಂಥ ಜಗತ್ತಿನ
 ಶಾಂತಿ ಕಾಯುವ ಹೊಣೆ ಹೊತ್ತಿರುವ ದೇಶಕ್ಕೆ ಇಂಥ ಅಧ್ಯಕ್ಷನೇ?
ಆದರೆ ಒಬಾಮಾನಿಗೆ ಈ ಮೂಲಕ ಜಾಗತಿಕ ಶಾಂತಿ ಸ್ಥಾಪನೆಗಾಗಿ ಎರಡೆರಡು
 ನೊಬೆಲ್ ಶಾಂತಿ ಪ್ರಶಸ್ತಿ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕೊನೆಬೆಡಿ: ಒಬಾಮಾ ಒಸಾಮಾರ ಕಣ್ನಾಮುಚ್ಚಾಲೆ ಆಟದಲ್ಲಿ ಒಸಾಮಾ ಸೋತ.
        ಆಲ್ ಖೈದಾದವರಿಗೆ ಒಸಾಮಾನ ಸೊಲೇ ಗೆಲುವಿನ ಮೆಟ್ತಲು.

ಕ್ರಿಕೆಟಿನ ಮೂರ್ಖ ನಿಯಮಗಳು.

ಆಗಷ್ಟ್ 29, 2010

ಮೊನ್ನೆ ಶ್ರೀಲಂಕಾದಲ್ಲಿ ದಿಲ್ಶನ್ ಎಂಬವನ ಸಮಯಪ್ರಜ್ನೆಯಿಂದ ಸೆಹ್ವಾಗ ನಿಗೆ ಶತಕ ತಪ್ಪಿದ ಸಂಗತಿ ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಎದುರಾಳಿಗೆ ಅತಿ ಕಡಿಮೆ ರನ್ನು ನೀಡುವುದು ಯಾವುದೇ ಬೌಲರ್ ಮಾಡಬೇಕಾದ ಕೆಲಸ. ಅಂಥ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಅವನ ಮೇಲೆ ಮ್ಯಚ್ ಫಿಕ್ಸಿಂಗ್ ಆರೋಪ ಹೊರಿಸಬಹುದು. ಉದಾಹರಣೆಗೆ ಸೆಮಿಫೈನಲಿಗೆ ತೇರ್ಗಡೆಯಾಗಲು ರನ್ ಸರಾಸರಿ ಮುಖ್ಯ ಅಂತಿಟ್ತುಕೊಳ್ಳಿ, ಆಗ ನೋಬಾಲ್ ಮೂಲಕ ಕೇವಲ ಒಂದು ರನ್ ಬಿಡುವುದು ತಂಡದ ಹಿತದೃಷ್ಟಿಯಿಂದ ಮುಖ್ಯವೋ ಅಥವಾ ಸರಿಯಾದ ಎಸೆತ ಎಸೆದು ಬೌಂಡರಿಯೋ ಸಿಕ್ಸರೋ ನೀಡುವುದು ಮುಖ್ಯವೋ? ಆಗ ಸರಿಯಾದ ಎಸೆತ ಎ೩ಸೆದರೆ ತಂಡದ ಹಿತ ಬಲಿಕೊಟ್ಟಂತೆ ಆಗುತ್ತೆ. ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದುದರಿಂದ ರಣದೀವ್ ಅನ್ನುವ ಎಸೆತಗಾರನಿಗೆ ಶಿಕ್ಷೆಯೂ ದಿಲ್ಶನ್ನನಿಗೆ ದಂಡವೂ ಆಯಿತು. ಕ್ರಿಕೆಟಿನ ನಿಯಮವನ್ನು ಬಳಸಿಕೊಂಡುದಕ್ಕೆ ಯಾಕೆ ಶಿಕ್ಷೆ ಕೊಟ್ಟರೋ ಅರ್ಥವಾಗುವುದಿಲ್ಲ. ಶ್ರೀಲಂಕಾದವರೇನೂ ಸಾಚಾ ಅಲ್ಲ ಅಂತ ಎಲ್ಲರಿಗೂ ಗೊತ್ತು ಬಿಡಿ. ಅದಕ್ಕೆ ಮುರಲಿಧರನ್ ಕೈ ನೇರಗೊಳಿಸಿ ಎಸೆಯುವ ಬೌಲಿಂಗ್ ಸಾಕ್ಷಿ. ಅದು ಬಿಡಿ. ಆದರೆ ಕ್ರಿಕೆಟಿನ ನಿಯಮಗಳನ್ನು ರೂಪಿಸುವವರು ಈರೀತಿಯ ಮ್ಯಾನಿಪುಲೇಶನ್ ಗೆ ಅವಕಾಶ ಇಲ್ಲದಂತೆ ಮತ್ತು ತರ್ಕಬದ್ಧವಾಗಿ ನಿಯಮಗಳನ್ನು ರೂಪಿಸಬೇಕಾದುದು ಅಗತ್ಯ. ಕ್ರಿಕೆಟಿನಲ್ಲಿ ಬಾಲ್ ಡೆಡ್ ಆಗುವವರೆಗೂ ಅದು ಆಟದಲಿ ಇರುತ್ತೆ ಅಂತ ಸಾಮಾನ್ಯ ನಿಯಮ. ಈ ಮುಖ್ಯ ನಿಯಮವನ್ನು ಪರಿಗಣಿಸದೆ ನೋಬಾಲ್ ಮೊದಲೋ ಸಿಕ್ಸರ್ ಮೊದಲೊ ಎಂಬ ಪ್ರಶ್ನೆಗಳೇ ಮುಖ್ಯವಾದಾಗ ಈ ರೀತಿಯ ಮೂರ್ಖತನಗಳು ಕಾಣುತ್ತವೆ.ಬಾಲ್ ಡೆಡ್ ಆಗೋದು ಚೆಂಡು ಬೌಂಡರಿ ಹೊರಗೆ ಹೋದಾಗ ಅಥವಾ ಓಟ ನಿಂತಾಗ. ನೋಬಾಲ್ ಎಸೆದ ತಕ್ಷಣ ಬಾಲ್ ಡೆಡ್ ಆಗುತ್ತದಾದರೆ ನೋಬಾಲ್ ನಲ್ಲಿ ರನ್ನೌಟ್ ಆಗೂದು ಹೇಗೆ? ಬಾಲ್ ಡೆಡ್ ಆಗದೆ ಗೆಲ್ಲುವುದು ಎನ್ನುವ ನಿಯಮವೇ ತಪ್ಪು.

ಕೊನೆಬೆಡಿ : ಮೂರ್ಖನಿಯಮಗಳುಳ್ಳ ಕ್ರಿಕೇಟಿನ ಬಗ್ಗೆ ಇಷ್ಟು ತಲೆಕೆಡಿಸಿಕೊಳ್ಳುವ ನಾನೇ ಮೂರ್ಖ ಅಲ್ವೇ?

ಪೇಟೆ ಪಾಡ್ದನವೆಂಬ ಪಾಡು.

ಆಗಷ್ಟ್ 17, 2010

ಒಂದು ಸುಂದರ ಪದ್ಯಪೇಟೆ ಪಾಡ್ದನ

ದೇಶಕಾಲ ವಿಶೇಷದಲ್ಲಿ ಪ್ರಕಟವಾದ ಪೇಟೆ ಪಾಡ್ದನಎಂಬ ಸುಧನ್ವಾ ದೇರಾಜೆ ಬರೆದ ಪದ್ಯ ನಾನು ಇತ್ತೀಚೆಗೆ ಓದಿದ ಉತ್ತಮ ಪದ್ಯಗಳಲ್ಲಿ ಒಂದು. ಹಾಗೆ ಕಂಡರೆ ನನಗೆ ಬಹುಶಃ ಕವಿತೆಗಳಲ್ಲಿ ಸ್ವಲ್ಪ ಆಸಕ್ತಿ ಕಡಮೆ ಅಂತಲೇ ನನಗೆ ತೋರುತ್ತದೆ. ಹಾಗಾಗಿ ಆದಿತ್ಯವಾರದ ಪತ್ರಿಕೆಗಳನ್ನು ಕೊಂಡರೂ ಅದರಲ್ಲಿರುವ ಪದ್ಯಗಳನ್ನು ಹೆಚ್ಚಿನವುಗಳನ್ನು ಮೆಚ್ಚಲು ನನಗೆ ಸಾಧ್ಯವಾಗುದಿಲ್ಲ.ಯಾಕೆಂದರೆ, ಅಂಥ ಹೆಚ್ಚಿನ ಪದ್ಯಗಳಿಗೆ ಹೇಗೆ ಬೇಕಾದರೂ ಅರ್ಥ ಮಾಡಬಹುದಾಗಿರುತ್ತೆ. ನಮಗೆ ಖುಶಿಬಂದಂತೆ ಅರ್ಥಮಾಡಬಹುದಾದ ಪದ್ಯ ಬರೆಯುವುದರಲ್ಲಿ ಕವಿಯ ಹೆಚ್ಚುಗಾರಿಕೆ ಏನುಂಟು ಅಂತ ಕೇಳುವವನು ನಾನು. ಹಾಗಂತ ಕವಿತೆಗಳಿಗೆ ಹಲವು ಅರ್ಥಗಳು ಇರಬಾರದು ಅನ್ನುವುದಿಲ್ಲ ನಾನು. ಅಡಿಗರೂ ಸೇರಿದಂತೆ ಆ ತಲೆಮಾರಿನ ಹೆಚ್ಚಿನವರ ಕವನಗಳು ನಿರಾಶೆ ಹುಟ್ತಿಸುವುದಿಲ್ಲ. ಆದರೆ ಇತ್ತೀಚಿನ ಕವಿಗಳ ಎಷ್ಟೋ ಕವನಗಳು ಅರ್ಥವಾಗೊಲ್ಲ ಅಥವಾ ಅವುಗಳಿಗೆ ನಿರ್ದಿಷ್ಟ ಅರ್ಥವಿರೋದಿಲ್ಲ. ಎಲ್ಲ ಅಂತಲ್ಲ, ತುಂಬ ಕವನಗಳು ಹಾಗೆ. ಅಂದರೆ ಅಂಥ ಕವನಗಳ ಒಂದು ಸಾಲನ್ನು ತೆಗೆದು ಬೇರೊಂದು ಸಾಲು ಹಾಕಿದರೂ ವ್ಯತ್ಯಾಸವೇನೂ ಆಗಲಿಕ್ಕಿಲ್ಲ ಅನ್ನುವಂಥ ಸಾಲುಗಳಿರುತ್ತವೆ. ಇನ್ನು ಕೆಲವು ಕವನಗಳು ಸಮಾಜದ ಮೇಲು ಕೀಳಿನ ಬಗ್ಗೆ ಅಥವಾ ಸಾಮಾಜಿಕ ನ್ಯಾಯ ಅನ್ಯಾಯದ ಬಗ್ಗೆ ಹೇಳುತ್ತವೆ . ಅವುಗಳಲ್ಲಿ ಅರ್ಥವಿರುತ್ತದೆ, ಪ್ರಸ್ತುತ ವಿಚಾರಗಳನ್ನೂ ಹೇಳುತ್ತವೆ ನಿಜ, ಆದರೆ, ಹೆಚ್ಚಿನ ಬಾರಿ ಅವು ತುಂಬ ಸರಳವಾಗಿ ನಮ್ಮ ತಲೆಯಲ್ಲಿರುವುದನ್ನೇ ಹೇಳುವುದರಿಂದ ಕಲೆಯಾಗಿ ಸೆಳೆಯುವುದಿಲ್ಲ ಅನಿಸುತ್ತದೆ. ಇಷ್ಟೆಲ್ಲಾ ಹೇಳಿದ್ದು ಯಾಕೆಂದರೆ ಪೇಟೆ ಪಾಡ್ದನ ಕವನ ನನ್ನನ್ನು ತುಂಬ ಸೆಳೆಯಿತು ಅಂತ ಹೇಳಲು. ಅದೊಂದು ಉತ್ತಮ ಕಲಾಕೃತಿ ಆಗಿರುವುದೇ ಇದಕ್ಕೆ ಕಾರಣ ಅಂತ ನನ್ನ ಅಂದಾಜು. ಈ ಕವನ ಹಿಂದೊಮ್ಮೆ ಸಂಕ್ಷೇಪ ರೂಪದಲ್ಲಿ ಬೇರಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅಂತ ನನ್ನ ನೆನಪು.

ಪೇಟೆ ಪಾಡ್ದನ ಎಂಬ ಪದವೇ ಎಷ್ಟು ಚೆನ್ನಾದ ಒಂದು ವಿರೋಧಾಭಾಸ ಅಲಂಕಾರ ( ಬಹುಶಃ ಪ್ಯಾರಡೊಕ್ಸ್ ಅನ್ನುವ ಫಿಗರ್ ಆಫ್ ಸ್ಪೀಚ್) ಎಂದು ನೋಡಿ. ತಂಪು ಕೆಂಡ ಅಂತ ಹೇಳಿದ ಹಾಗೆ. ಪಾಡ್ದನಕ್ಕೂ ಪೇಟೆಗೂ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಒಂದಲ್ಲ ಒಂದು ರೀತಿಯ ಪಾಡ್ದನ ಅಥವಾ ಹಾಡು ಎಲ್ಲ ಮಾನವರಿಗೂ ಬೇಕೇ ಬೇಕು. ಪೇಟೆಯಲ್ಲೂ ಬೇಕು ಹಳ್ಳಿಯಲ್ಲೂ ಬೇಕು. ಮನುಷ್ಯನದೊಂದು ಪಾಡು ಇದೆಯಲ್ಲ, ಅದು ಎಲ್ಲೆಡೆ ಉಂಟು. ಆದರೆ ಪೇಟೆಯದೊಂದು ಪಾಡು , ಹಳ್ಳಿಯದೊಂದು ಪಾಡು. ಪಾಡುಗಳೇ ಇಲ್ಲಿ ಪಾಡ್ದನವಾಗಿದೆ. ಲಕಲಕಿಸುವ

 

 

ನಗರಕೊಂದು ಬೆದರಿದ ಬೆದರು ಗೊಂಬೆ ಬೇಕು ಎನ್ನುತ್ತಾ ಕವನ ಆರಂಭವಾಗುತ್ತದೆ. ಆದರೆ ಆಗೊಂಬೆಯೂ ತಕ್ಷಣ ಮಾರಾಟವಾಗುತ್ತದೆ. ಇಲ್ಲಿ ದ್ಯೂತ ಪ್ರಸಂಗದಲ್ಲಿ ಸೋತವರಿಗೆ ೧೨ ವರ್ಷ

ಹಳ್ಳಿ ವಾಸ, ಗೆದ್ದವರಿಗೊಂದು ವರ್ಷ ನಗರದ ಅಜ್ಞಾತವಾಸ !! ನಗರದಲ್ಲಿ ಸಮಸ್ಯೆಗಳೇನು? ಪೈನ್ ಕಿಲ್ಲರ್ ಮಾತ್ರೆ, ಸಂಬಳ ಸಾಕಾಗಲ್ಲ ಓನರ್ ಸರಿಯಿಲ್ಲ ಎಲ್ಲಕ್ಕಿಂತ ದೋಡ್ದ ಸಮಸ್ಯೆ ನೆಟ್

ಕನೆಕ್ಟ್ ಗ್ತಿ….ಲ್ಲ್ಲಾ … “ತಕ್ಷಣ ಅಮ್ಮನ ಕಾಗದದಲ್ಲಿ ಇರುವುದು ಬರುತ್ತದೆ, “ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ“. 

ಪೇಟೆ ,ಪಟ್ಟಣ , ನಗರ ಆಗಿ ಮಹಾನಗರಕ್ಕೆ ಬಂದವನುದಿಕ್ಕು ತಪ್ಪಿಅಲೆಯುತ್ತಿದ್ದಾಗ ಬೇಕಾದ್ದೆಲ್ಲ ಸಿಕ್ಕಿತು.!!! ಅಮ್ಮನಿಗೆ ಪ್ಯಾಂಟು ತಿಕ್ಕಿ ತಿಕ್ಕಿ ತೊಳೆವಾಗ ಸಿಕ್ಕಿದ ರೂ ನೋಟನ್ನು ಇವನು ಬಿಸಿಲು ಬಂದ ನಂತರ ಎದ್ದವನು ಕಣ್ಣು ತಿಕ್ಕಿ ತಿಕ್ಕಿ ನೋಡಬೇಕಾಗುತ್ತದೆ, ನಗು ಬರುತ್ತದೆ

 

 

ನಗರದೇವತೆಗಳು ಬೆಳೆಯುವುದು ಹಳ್ಳಿಗರ ಹವಿಸ್ಸಲ್ಲಿ ಅನ್ನೋದು ಅದ್ಭುತ ಹೇಳಿಕೆ.

ಹಳ್ಳೀಗರ ಹವಿಸ್ಸಲ್ಲಿ ಬೆಳೆದ ನಗರ ದೇವತೆಗಳೆ

 

 

ಇದೋ ಸುರಿದಿದ್ದೇವೆ ತುಪ್ಪ ನಿಮ್ಮ ಬೆಂಕಿಗೆ, ತೃಪ್ತರಾಗಿ..

 

 

ಇದು ಇನ್ನೋಂದು ಪುತ್ರಕಾಮೇಷ್ಟಿ

ನಮ್ಮ ಮಕ್ಕಳ ನಮಗೆ ದಯಪಾಲಿಸಿ.” ….. ಛೆ!! ಎಂಥಾ ಸಾಲುಗಳು!! 

 

 

ಹಳ್ಳಿಯಲ್ಲಿ ಕೂತು ರೇಡಿಯೋದಲ್ಲಿ ಪೇಟೆಧಾರಣೆ ಕೇಳುತ್ತಾ ಅಡಿಕೆಯೋ ಕಾಳುಮೆಣಸು, ಬಾಳೆಕಾಯಿ ರೇಟು ಕ್ತಿಳಕೊಳ್ಳುವ ಕಾಲವೊಂದಿದ್ದದ್ದು ಗೊತ್ತಿದ್ದವರಿಗೆ ಮುಂದಿನ ಸಾಲು ತಟ್ಟದೇ ಇರದು

ಈಗ ಜನಿವಾರ ಧಾರಣೆ

ಈಗ ಕಿರೀಟ ಧಾರಣೆ

ಈಗ ಲಿಂಗ ಧಾರಣೆ

ಈಗ ಮುದ್ರೆ ಧಾರಣೆ

ಶ್ಮಾತಾಡಬೇಡಿ.

 

 

ಅದೆಲ್ಲ ಯಾರಿಗೆ ಬೇಕು?

 

 

ಈಗ ಪೇಟೆ ಧಾರಣೆ !!” 

 

 

ಇನ್ನೋಮ್ದು ಸಾಲು ನೋಡಿ

ಸಿಟಿ ಯಾಕೋ ಸಿಡುಕ್ಯಾಕೋ ನನಗಂಡ…”

 

 

ಅಲ್ಲಿ ದುಡಿದರೆ ಊಟ ಸಿಗುತ್ತೆ ಹಸಿವು ಇರೊಲ್ಲ.

 

 

ಕವನದ ಕೊನೆಯ ಭಾಗಕ್ಕಾಗುವಾಗ ಸಂಪೂರ್ಣ ಆಧುನಿಕಗೊಂಡ ಈಚಿನ ನಗರ ಜೀವನ ಬರುತ್ತದೆ. ಸಾಲುಗಳನ್ನು ನೋಡಿ

 

ಚುಚ್ಚಿಸಿಕೋ ನವದ್ವಾರಗಳಿಗೆ ಪ್ಲಗ್ಗು

ಕಂಪ್ಯೂ ಪರದೆಗಳಲಿ ನಿನ್ನ ಏರಿಳಿತ

ಶಟ್ ಡೌನೂ ಶಿಟ್ ಡೌನೂ ಆಗದೆ

ಅಯ್ಯೋ ಪಜೀತಿ, ತಿನ್ನು ತಿರುಪತಿ ಪ್ರಸಾದ !!” 

 

 

ಕೊನೆಗೆ ಮೊಬೈಲಲ್ಲಾದರೂ ಫೋಟೊ ತೆಗೆದ ಗುಬ್ಬಚ್ಚಿ , ಅದು ನಿಮ್ಮ ತಾತನ ಫೋಟೋದ ಹಿಂದೆ ಗೂಡು ಕಟ್ಟಿದ್ದ ಗುಬ್ಬಿಯ ನಾಲ್ಕನೇ ಸಂತಾನದ ಫೋಟೊ.”

 

 

 

ಕವನದ ಒಂದೊಂದು ಸಾಲನ್ನು ಕೂಡ ಹಿಂಜಿ ಹಿಂಜಿ ಅರ್ಥ ಮಾಡಬಹುದು . ಸದ್ಯಕ್ಕೆ ಸಮಯ ಸಾಲುತ್ತಿಲ್ಲ. ಹಾಗಾಗಿ ಅವಸರ ಮಾಡಿದ್ದೇನೆ. ಕವನ ಓದದವರಿಗೆ ಏನೂ ಸ್ಪಷ್ಟವಾಗದಿದ್ದರೆ ಕ್ಷಮಿಸಿ. ಓದದಿದ್ದರೆ ದಯವಿಟ್ಟು ಓದಿ.

 

 

ನಮ್ಮ ಇಂದಿನ ನವನಾಗರಿಕತೆಯ ಪರಿಣಾಮಗಳ ಹಲವು ಮಗ್ಗುಲುಗಳನ್ನು ಇದು ಚಿತ್ರಿಸುತ್ತದೆ. ’ದುರಂತವನ್ನು ಸುಂದರವಾಗಿ ಹೇಳಿದ ಕವನ ಇದು. 

ಕೊನೆ ಬೆಡಿ : ನನ್ನ ಕಂಪ್ಯೂಟರ್ ಕಿಟಕಿ ವಾಸ್ತು ಪ್ರಕಾರ ಇಲ್ಲದೆ ಇರುವುದರಿಂದಲೋ ಎನೋ ಆಗಾಗ ನನ್ನ ಕಂಪ್ಯೂಟರ್ ಕೈಕೊಡುತ್ತದೆ. ಕಿಟಕಿಯನ್ನು ಕಂಪ್ಯೂಟರ್ ಹಿಂಭಾಗಕ್ಕೆ ಇಡಬೇಕೆಂದಿದ್ದೇನೆ. 

 

 

ದೇಶಕಾಲ ವಿಶೇಷದ ಚರ್ಚೆ

ಜುಲೈ 4, 2010

ಅವಧಿಯಲ್ಲಿ ಪ್ರಕಟವಾದ ಒಂದು ಲೇಖನಕ್ಕೆ ಪ್ರತಿಕ್ರಿಯೆಯಾಗಿ ನಾನು ಬರೆದ ಪ್ರತಿಕ್ರಿಯೆಯನ್ನು ಇಲ್ಲಿ ಹಾಕಿದ್ದೇನೆ. ಮಾನ್ಯ ಮಂಜುನಾಥ ಲತಾ ಮತ್ತು ಐಜೂರ್ ಅವರೆ,
ನಿಮ್ಮ ಲೇಖನ, ಜಾತಿ ನೋಡಿಯೇ ಒದಬೇಕು ಎಂದು ವಾದಿಸುವಂಥ ಲೇಖನ. ಸಾಹಿತ್ಯವನ್ನು ನಮ್ಮ ನಡುವಿನ ಸಾಮಾಜಿಕ ಸಾಂಸ್ಕೃತಿಕ ಬದುಕಿನ ಹಿನ್ನೆಲೆಯಲ್ಲಿ ನೋಡುವುದು ತಪ್ಪು ಎಂದು ಯಾರೂ ಹೇಳಲಾರರು. ಆದರೆ ನಿಮ್ಮ ವಾದವನ್ನು ಗಮನಿಸಿದರೆ ಅಥವಾ ನಿಮ್ಮ ವಾದವನ್ನು ಕತೆ, ಕವನ ಮೊದಲಾದ ಸೃಜನಶೀಲ ರಚನೆಗಳ ಹೊರತಾದ ಬರಹ, ಚಿಂತನೆಗಳಿಗೂ ವಿಸ್ತರಿಸಿದರೆ ಅಂಥ ಚಿಂತನೆ ಮಾಡುವ ಹಕ್ಕು ಕೂಡ ಕೇವಲ ಶೂದ್ರ ದಲಿತರಿಗೆ ಮಾತ್ರ ಇದೆ ಎನ್ನಬೇಕಾಗುತ್ತದೆ. ಈಗಾಗಲೇ ಹಲವು ಪ್ರತಿಕ್ರಿಯೆಗಳು ತೋರಿಸಿರುವಂತೆ ಬರೆದವನ ಜಾತಿ ಯಾವುದು ಎನ್ನುವುದನ್ನು ಆಧರಿಸಿದ ವಿಮರ್ಶೆಯನ್ನು ಮಟ್ಟಕ್ಕೆ ಎಳೆಯುವುದು ಅಪಾಯಕಾರಿ. (ಅದು ಬ್ರಾಹ್ಮಣರಿಗೆ ಮಾತ್ರ ಅಪಾಯಕಾರಿ ಎಂದು ನೀವು ಯಥಾಪ್ರಕಾರ ವ್ಯಂಗ್ಯ ಮಾಡುವುದಾದರೆ ನನ್ನ ಮೌನ). ದೇಶಕಾಲ ಪರಮ ಶ್ರೇಷ್ಟವಾಗಿ ಬಂದಿದೆ ಎಂದು ನಾನು ಹೇಳುವುದಿಲ್ಲ. ಅದರಲ್ಲಿರುವ ಬರಹಗಳನ್ನು ನೀವು ನಿಮ್ಮ ಸೈದ್ಧ್ಗಾಂತಿಕ ಹಿನ್ನೆಲೆಯಲ್ಲಿ ಗಂಭೀರವಾಗಿ ವಿಮರ್ಶಿಸಿದರೆ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಉಪಕಾರವಾಗುತ್ತಿತ್ತು. ಇನ್ನು ಕುವೆಂಪು ಅವರ ಕೈಬರಹವನ್ನು ಹಾಕಿ ಒಂದಿಡೀ ಪುಟವನ್ನು ಖಾಲಿ ಬಿಟ್ಟದ್ದು ಅವರಿಗೆ ಉಳಿದವರಿಗಿಂತಲೂ ಹೆಚ್ಚು ಮಹತ್ವ ಕೊಟ್ತಂತಾಗಿದೆ ಎಂದು ನನಗೆ ಕಂಡಿತ್ತು. ಅಷ್ಟೇ ಅಲ್ಲ ಕುವೆಂಪು ಅವರ ಹೇಳಿಕೆ ಉಳಿದಭಟ್ರುಗಳ ಕೈಬರಹಗಳಂತೆ ಒಂದು ಯಾಂತ್ರಿಕ ಮೊದಲ ಪುಟವೋ ಇನ್ನೊಂದೋ ಅಲ್ಲದೆ ಒಂದು ದಾರ್ಶನಿಕ ಹೇಳಿಕೆ ಕೂಡ ಹೌದು. ಇಡೀ ಕಲಿಯುವ ಅಥವಾ ಅರಿವಿನ ಪ್ರಕ್ರಿಯೆಯ ಕುರಿತ ದಾರ್ಶನಿಕ ಹೇಳಿಕೆ ಅದು; ಕೇವಲ ವ್ಯಾಕರಣಕ್ಕೆ ಸಂಬಂಧಿಸಿದ್ದಲ್ಲ. ಅದರ ಮಹತ್ವವನ್ನು ಕಂಡೇ ಹಾಕಿರಬಹುದು. ಒಳ ಮುಖಪುಟಗಳಲ್ಲಿ ಕಾರಾಂತರದ್ದು ಗೊಕಾಕರದ್ದು ಕೈಬರಹಗಳು ಕೂಡ ಇಲ್ಲ.(ನಿಮ್ಮ ಲೇಖನ ಓದಿದಮೇಲೆ ನಾನು ಹುಡುಕಿದ್ದು) ನುಗಡೋಣಿಯಂಥವರ ಒಳ್ಳೆ ಕತೆಗಳನ್ನು ಮೀಸಲಾತಿ ನೀತಿಯಿಂದ ಹಾಕಿದ್ದಾರೆ ಎಂದು ಹೇಳುವ ಮೂಲಕ ನೀವು ಲೇಖಕರಿಗೆ ಅವಮಾನ ಮಾಡುತ್ತಿದ್ದೀರಿ. “ಸಂಚಿಕೆಗೆ ಬರೆಯುವ ಮುಂಚೆ ದೇಶಕಾಲದಿಂದ ಬಂದ ಆಫರ್ ನೋಡಿಯೇ ಮೂರ್ಚೆ ಹೋಗಿದ್ದ ಕೆಲ ಶೂದ್ರ ದಲಿತ ಲೇಖಕರು ದೇಶಕಾಲ ಹೊರ ಬರುತ್ತಲೇ ಅದರ ಜಾತೀಯತೆಯ ಪರಿಮಳಕ್ಕೆ ಮೂರ್ಚೆ ಹೋಗತೊಡಗಿದ್ದಾರೆ.” ಎಂದಿದ್ದೀರಿ. ಇದು ಬೇಜವಾಬುದಾರಿ ಹೇಳಿಕೆ ಯಾಕೆಂದರೆ ಅಂಥ ಲೇಖಕರ ಹೆಸರನ್ನು ನೀವು ಹೇಳಿಲ್ಲ. ಅವರಾರೂ ಕಳೆದ ಕೆಲ ವರ್ಷಗಳಿಂದ ಬರುತ್ತಿರುವ ದೇಶಕಾಲವನ್ನು ನೋಡಿಯೇ ಇರಲಿಲ್ಲವೇ? ಪತ್ರಿಕೆಯ ತಾತ್ವಿಕತೆ ವಿಶೇಷ ಸಂಚಿಕೆ ಬಂದ ಕೂಡಲೇ ತಿರಸ್ಕಾರಯೋಗ್ಯ ಆದದ್ದೆ? ಇದೇ ಪ್ರಶ್ನೆ ಚೆನ್ನಿಯವರಿಗೂ ಕೇಳಬೇಕಾಗಿದೆ. ರಮೇಶರ(ಕವಿ) ಬಗ್ಗೆ ದೇಶಕಾಲದಲ್ಲಿ ಬರೆದ ಬಗ್ಗೆ ಈಗ ಅವರಿಗೆ ಮುಜುಗರ ಆಗಿದೆ ಅಂದರೆ ಮುಂಚೆ ಯಾವ ಮಾಹಿತಿಯು ಇಲ್ಲದೆ ಅವರು ಒಬ್ಬ ಕವಿ ಬಗ್ಗೆ ಬರೆಯಲು ಒಪ್ಪಿದ್ದರೆ? ಅಂದರೆ ಅವರೂ ದೇಶಕಾಲದಿಂದ ಬರೆಯಲು ಬಂದ ಆಫರ್ ನಿಂದ ರೋಮಾಂಚಿತರಾಗಿ ಮೂರ್ಚೆ ಹೋಗಿದ್ದರೆ? ನಮಸ್ಕಾರ

ಕೊನೆಬೆಡಿ: ಇಡೀ ದಿನದಲ್ಲಿ ಅಡಿಗೆ ಮಾಡುವುದು ಒಂದೆರಡೇ ಗಂಟೆಗಳಾದರೂ ಸಿಲಿಂಡರಿನ ಗ್ಯಾಸ್ ಮುಗಿಯುವುದು ಅಡಿಗೆ ಮಾಡುತ್ತಿರುವಾಗಲೇ.

ಕ್ರಿಕೆಟ್ ಕ್ರಿಕೆಟ್ ಕ್ರಿಕೆಟ್

ಜೂನ್ 2, 2010

ಕ್ರಿಕೆಟೆಂಬ ಹುಚ್ಚು

ಮೊನ್ನೆ ಭಾರತ ೨೦೨೦ ಕ್ರಿಕೆಟ್ ನಲ್ಲಿ ಹೀನಾಯವಾಗಿ ಸೋತದ್ದು ಮತ್ತು ಚೆಸ್ಸಿನಲ್ಲಿ ವಿ.ಆನಂದ್ ವಿಶ್ವ ಚಾಂಪಿಯನ್ ಆಗಿ ನಾಕನೇ ಬಾರಿಗೆ ,ಅದರಲ್ಲೂ ಸತತವಾಗಿ ಮೂರನೇ ಬಾರಿಗೆ ಮೂಡಿಬಂದದ್ದು ಒಟ್ಟೊಟ್ಟಿಗೇ ಆಯಿತು. ಹೀಗಾದದ್ದರಿಂದ ಅನೇಕ ಕ್ರೀಡಾವಿಶ್ಲೇಷಕರು ಹಾಗೂ ಸಾಮಾನ್ಯ ಕ್ರೀಡಾಭಿಮಾನಿಗಳು ಕ್ರಿಕೆಟಿಗೆ ಈ ದೇಶದಲ್ಲಿ ನೀಡಲಾಗುವ ಮಹತ್ವ ಮತ್ತು ಇತರ ಆಟಗಳ ಬಗ್ಗೆ ಅಲಕ್ಷ್ಯದ ಬಗ್ಗೆ ತುಂಬ ಬರೆದಿದ್ದಾರೆ ಮತ್ತು ಹೇಳಿದ್ದಾರೆ.

ನನಗೆ ನಿಜವಾಗಿ ಆಸಕ್ತಿಯ ಆಟವೆಂದರೆ ಕ್ರಿಕೆಟ್ಟೇ. ಯಾಕೆಂದರೆ ಕ್ರಿಕೆಟ್ಟು ಆಡಲು ಹೆಚ್ಚು ಖರ್ಚು ಇಲ್ಲ.ಬ್ಯಾಟು ಮಾಡಲು ತೆಂಗಿನ ಕೊತ್ತಳಿಗೆ ಕೂಡ ಆಗುತ್ತಿತ್ತು ನಾವು ಚಿಕ್ಕವರಿದ್ದಾಗ. ಚೆಂಡು ಬಾಳೆ ಚಾಂಬಾರಿನದೂ ಆಗುತ್ತಿತ್ತು. ಹತ್ತು ಇಂಟು ಇಪ್ಪತ್ತು ಅಡಿ ಅಂಗಳದಲ್ಲೂ ಕ್ರಿಕೆಟ್ ಆಡಬಹುದು ನಮ್ಮದೇ ರೂಲ್ಸುಗಳೊಂದಿಗೆ. ಹಾಗೆಯೇ ಕ್ರಿಕೆಟ್ಟು ಆಡಲು ಅಥವಾ ನೋಡಲು ಚೆಸ್ಸಿನ ಹಾಗೆ ಹೆಚ್ಚು ತಲೆಖರ್ಚು ಮಾಡುವ ಅಗತ್ಯವಿಲ್ಲ. ತಲೆಖರ್ಚು ಮಾಡುವುದೆಂದರೆ ನಾನು ಮೊದಲಿಂದಲೂ ಸ್ವಲ್ಪ ಜಿಪುಣನೇ. ಕ್ರಿಕೆಟ್ಟಿನ ಮೇಲೆ ನನಗೆ ವಿಶೇಷ ಮಮತೆ ಇರಲು ಇನ್ನೊಂದು ಕಾರಣವೆಂದರೆ ನಾನು ನನ್ನ ಹತ್ತುಹನ್ನೊಂದನೇ ವಯಸ್ಸಿನಲ್ಲಿಯೇ ಭಾರತ ತಂಡವನ್ನು ಫೋಲ್ಲೋ ಮಾಡಲು ಆರಂಭ ಮಾಡಿದ್ದು. ನಾನು ಬಹುಶ ನಾಕನೇ ಅಥವಾ ಐದನೇ ಕ್ಲಾಸಿನಲ್ಲಿ ಇದ್ದಾಗ ಇರಬೇಕು ನಾನು ಮೊದಲು ಕಮೆಂಟ್ರಿ ಕೇಳಿದ್ದು. ನನಗೆ ಕ್ರಿಕೆಟಿನ ಹುಚ್ಚು ಹಿಡಿದದ್ದು ಭಾರತ ಮತ್ತು ಇಂಗ್ಲೆಂಡುಗಳ ನಡುವಿನ ಒಂದು ಸರಣಿಯ ಮಧ್ಯದಲ್ಲಿ. ಹಾಗೆ ನನಗೆ ಸಡನ್ನಾಗಿ ಹುಚ್ಚು ಹಿಡಿದದ್ದು ಹೇಗೆ ಎಂದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಸಾಮಾನ್ಯವಾಗಿ ಇಂಥ ಹುಚ್ಚುಗಳು ಗ್ರಾಜುಯಲ್ಲಾಗಿ ಹಿಡಿಯುವುದು. ಸಡನ್ನಾಗಿ ಹಿಡಿದದ್ದು ಹುಚ್ಚೇ ಅನ್ನಲು ಕಾರಣವೇನೆಂದರೆ ಆನಂತರದ ಹೆಚ್ಚು ಕಡಿಮೆ ಪ್ರತಿಯೊಂದು ಪಂದ್ಯವನ್ನೂ ನಾನು ಪತ್ರಿಕೆ ಅಥವಾ ರೇಡಿಯೋ ಕಮೆಂಟ್ರಿ ಮೂಲಕ ಫೋಲ್ಲೋ ಮಾಡುತ್ತಿದ್ದೆ. ನನಗೆ ಕ್ರಿಕೆಟ್ ಅಂತ ಒಂದಿದೆ ಎಂದು ಗೊತ್ತಾಗುವಾಗ ಆ ಸರಣಿಯಲ್ಲಿ ಒಂದು ಪಂದ್ಯವನ್ನು ಭಾರತ ಗೆದ್ದಾಗಿತ್ತು ಅನಿಸುತ್ತದೆ. ಅದು ಮೊದಲ ಪಂದ್ಯ ಇರಬೇಕು. ಆ ಗೆದ್ದ ವಿಷಯ ನನಗೆ ಆನಂತರ ಗೊತ್ತಾದದ್ದು. ನನ್ನ ನೆನಪಿನ ಪ್ರಕಾರ ಆ ಸರಣಿಯ ನಂತರದ ಐದು ಟೆಸ್ಟ್ ಗಳೂ ಡ್ರಾ ಆಗಿರಬೇಕು. ಒಟ್ಟಿನಲ್ಲಿ ಆ ಸರಣಿಯನ್ನು ಭಾರತ ಒಂದುಸೊನ್ನೆ ಅಂತರದಲ್ಲಿ ಗೆದ್ದಿತ್ತು. ಒಂದು ಇನ್ನಿಂಗ್ಸ್ ನಲ್ಲಿ ಕಪಿಲ್ ದೇವ್ ಮತ್ತು ಮದನ್ ಲಾಲ್ ತಲಾ ಐದು ವಿಕೆಟ್ ಗಳನ್ನು ಪಡೆದು ಮಿಂಚಿದ್ದರು. ಆಗ ಇಂಗ್ಲೆಂಡಿನ ನಾಯಕನಾಗಿದ್ದವನು ಕೀತ್ ಫ್ಲೆಚರ್ ಎಂಬ ಅನಾಮಧೇಯ.

ಹೀಗೆ ಹಿಡಿದ ಹುಚ್ಚಿನಿಂದಾಗಿ ಪತ್ರಿಕೆಗಳ ಕ್ರೀಡಾಪುಟವನ್ನು ಓದುವ ಅಭ್ಯಾಸ ಬೆಳೆಯಿತು. ಎಲ್ಲಾ ಪಂದ್ಯಗಳ ಕಮೆಂಟ್ರಿ ಹೇಗೂ ಸಿಗುತ್ತಿರಲಿಲ್ಲ. ಆಗ ಉದಯವಾಣಿಯಲ್ಲಿ ಮೂರನೇ ಪುಟದಲ್ಲಿ ಆಟವಿದ್ದರೆ ಕನ್ನಡಪ್ರಭದಲ್ಲಿ ಬಹುಶ ಕೊನೆಯ ಪುಟದಲ್ಲಿ ಇತ್ತು. ಕ್ರಿಕೆಟ್ ಸರಣಿ ಇಲ್ಲದಿದ್ದಾಗ ಏನು ಮಾಡುವುದು? ಬೇರೆ ಆಟಗಳ ಬಗೆಗಿನ ವರದಿ ಓದುವುದು. ಅಂಥ ದಿನಗಳಲ್ಲಿ ಅನತೊಲಿ ಕಾರ್ಪೊವ್ ಮತ್ತು ಗ್ಯಾರಿ ಕಾಸ್ಪರೊವ್ ನಡುವಿನ ಚೆಸ್ ಹೋರಾಟದ ಸರಣಿಯನ್ನು ಪತ್ರಿಕೆಗಳಲ್ಲಿ ಫೊಲ್ಲೋ ಮಾಡುವುದಿತ್ತು. (ಕೊನೆಗೆ ಕಾಸ್ಪರೊವ್ ಗೆದ್ದದ್ದು ಇತ್ಯಾದಿ. ನಮ್ಮ ಆನಂದ್ ಕೂಡ ಕಾಸ್ಪರೊವ್ ಜತೆ ನಂತರ ಆಡಿದರು.) ಕೊನೆಗೆ ಏನೂ ಇಲ್ಲದಿದ್ದರೆ ಅತ್ಲೆಟಿಕ್ಸ್ ನಂಥ ಅನಾಕರ್ಷಕ ಕ್ರೀಡಾವಿಷಯಗಳ ಅಂಕಿ ಅಂಶಗಳು ಕೂಡ ಆಗುತ್ತಿತ್ತು. ( ಸಿಗರೇಟು ಸೇದಿ ಅಭ್ಯಾಸವಾಗಿದ್ದ ನನ್ನ ಪಿ.ಯು.ಸಿ. ಕ್ಲಾಸ್ ಮೇಟ್ ಒಬ್ಬ ಹಾಸ್ಟೆಲ್ಲಿನಲ್ಲಿ ಅದು ಸಿಗದಿದ್ದಾಗ ಊದುಬತ್ತಿ ಹೊತ್ತಿಸಿ ಬಾಯೊಳಗಿಡುತ್ತಿದ್ದನಂತೆ, ಹಾಗೆ ). ಆಗ ಉದಯವಾಣಿಯಲ್ಲಿ ಮಂಗಳೂರು ವಿ.ವಿ. ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಗಳ ವರದಿ ಕೂಡ ಬರುತ್ತಿತ್ತು. ಕಾರ್ಕಳ ಭುವನೇಂದ್ರ ಕಾಲೇಜಿನ ಸಂದೀಪ್ ಆರ್ಯ ಎಂಬ ಆಟಗಾರನೊಬ್ಬ ಆ ದಿನಗಳಲ್ಲಿ ಆ ಕಾಲೇಜಿನ ಪರವಾಗಿ ಸತತವಾಗಿ ಶತಕ ಬಾರಿಸಿದ ವರದಿ ಬರುತ್ತಿತ್ತು. ಆತ ಏನಾದನೋ ಗೊತ್ತಿಲ್ಲ, ಅವನು ರಣಜಿಯಾದರೂ ಆಡುವ ನಿರೀಕ್ಷೆ ಆಗ ನನಗೆ ಇತ್ತು. ಆಡಿದಂತಿಲ್ಲ.

ರಣಜಿ ಪಂದ್ಯಗಳು ಹೇಗೂ ಆಕರ್ಷಣೆಯೇ ಆಗಿತ್ತು. ಕನ್ನಡದ ಕಮೆಂಟ್ರಿ ಕೇಳಲು ಖುಷಿಯಾಗುತ್ತಿತ್ತು. ಮುಂಬೈ ಮತ್ತು ಕರ್ನಾಟಕ ನಡುವಿನ ಒಂದು ರಣಜಿ ಪಂದ್ಯದಲ್ಲಿ ಒಂದು ತೀರ್ಪಿನ ಬಗ್ಗೆ ವಿರೋಧ ಸೂಚಿಸಲು ಗಾವಸ್ಕರ್ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿದ್ದ. ಗಾವಸ್ಕರ್ ಭಾವ ಜಿ.ಆರ್.ವಿಶ್ವನಾಥ್ ಆಗ ಕರ್ನಾಟಕ ತಂಡದಲ್ಲಿದ್ದ.( ಗಾವಸ್ಕರನನ್ನು ಆಗೆಲ್ಲ ಗವಾಸ್ಕರ್ ಅಂತಿದ್ದುದು.) ಈ ಗಾವಸ್ಕರ್ ಮಹಾ ಪಿಸುಂಟನಾಗಿದ್ದ ಆಗ. ಸ್ವಾರ್ಥಿ ಕೂಡ. ಕಪಿಲ್ ದೇವ್ ಬಗ್ಗೆ ಗಾವಸ್ಕರ್ ಗೆ ಮತ್ಸರವಿತ್ತು ಎಂಬ ಭಾವನೆ ಆಗ ಕ್ರಿಕೆಟ್ ಪ್ರಿಯರಲ್ಲಿ ಸಾಮಾನ್ಯವಾಗಿತ್ತು. ಗಾವಸ್ಕರ್ ನಾಯಕನಾಗಿದ್ದಾಗ ಒಮ್ಮೆ ಅಕಾರಣವಾಗಿ ಕಪಿಲ್ ದೇವ್ ನನ್ನು ಒಂದು ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ಕಪಿಲ್ ದೇವ್ ಗೆ ಇದ್ದ ಒಂದೇ ಒಂದು ಡ್ರಾಬೇಕ್ ಅಂದ್ರೆ ಅವನಿಗೆ ಇಂಗ್ಲಿಷ್ ಫ್ಲುಯೆಂಟ್ ಇರಲಿಲ್ಲ. ಇಂದಿಗೂ ಅಷ್ಟೆ, ಕಪಿಲ್ ಮಾಧ್ಯಮಗಳಲ್ಲಿ ಕಾಣಿಸುವುದು ಕಡಿಮೆಯೇ. ೧೯೮೩ರಲ್ಲಿ ಲಾರ್ಡ್ಸ್ ನಲ್ಲಿ ವಿಶ್ವಕಪ್ ಕಪಿಲ್ ನಾಯಕತ್ವದಲ್ಲಿ ಗೆದ್ದರೂ ಆ ನಾಯಕತ್ವ ತುಂಬ ದೀರ್ಘ ಕಾಲ ಉಳಿಯಲಿಲ್ಲ. ಆಸ್ಟ್ರೆಲಿಯದಲ್ಲಿ ನಡೆದ ರಾಥ್ಮನ್ಸ್ ಕಪ್ ಗೆ ಗಾವಸ್ಕರ್ ನಾಯಕನಾದ. ಅದರಲ್ಲಿ ರವಿಶಾಸ್ತ್ರಿ ಸರಣಿಶ್ರೇಷ್ಟನಾದ, ಭಾರತ ಕಪ್ ಗೆದ್ದಿತ್ತು. ಗಾವಸ್ಕರ್ ಇದ್ದಾಗ ಮುಂಬೈಗೆ ಮಹತ್ವ ಇತ್ತು ತಂಡದ ಆಯ್ಕೆಯಲ್ಲಿ. ಇದೇ ಕಾರಣಕ್ಕೆ ಬಾಳ ಠಾಕ್ರೆಗೆ ಗಾವಸ್ಕರನ ಮೇಲೆ ಪ್ರೀತಿ. ಮುಂಬೈಗೆ ಪ್ರಾಧಾನ್ಯ ಕೊಡಲಿಲ್ಲ ಎಂದು ತೆಂಡುಲ್ಕರ್ ಮೇಲೆ ಕೋಪ. ಗಾವಸ್ಕರ್ ಈಗ ಒಬ್ಬ ಒಳ್ಳೆಯ ವೀಕ್ಷಕವಿವರಣೆಗಾರ ಹೌದು. ಈಗ ೨೦೨೦ ಪಂದ್ಯಗಳಲ್ಲಿ ಹೇಗೆ ಬ್ಯಾಟನ್ನು ಬೀಸಬೇಕೆಂದು ವಿವರಿಸುವ ಗಾವಸ್ಕರ್ ಅಂದಿನ ೬೦ ಓವರುಗಳ ವಿಶ್ವಕಪ್ ಪಂದ್ಯವೊಂದರಲ್ಲಿ ಆರಂಭಿಕನಾಗಿ ಬಂದು ಇಡೀ ೬೦ ಓವರ್ ಆಡಿ ಕೇವಲ ಅಜೇಯ ೩೭ ರನ್ ಗಳಿಸಿದ್ದ ಪ್ರತಿಭಾವಂತ. ರವಿಶಾಸ್ತ್ರಿ ಕೂಡ ಹಾಗೆಯೇ. ಇಂದು ಒಳ್ಳೆಯ ವೀಕ್ಷಕವಿವರಣೆಗಾರ. ಉದಾಹರಣೆಗೆ , ಒಮ್ಮೆ ಭಾರತದ ವಿರುದ್ಧವೇ ಅಂಪೈರ್ ತೀರ್ಪು ಕೊಡುತ್ತಿದ್ದ ಒಂದು ಪಂದ್ಯದಲ್ಲಿ ಭಾರತದ ಒಬ್ಬ ಬೌಲರನ ಬಾಲು ಎದುರಾಳಿ ದಾಂಡಿಗನ ಕಾಲಿಗೆ ತಾಗಿದಾಗ ಅಂಪೈರ್ ಔಟ್ ಕೊಡಲಿಲ್ಲ .ಆಗ ಶಾಸ್ತ್ರಿ ಹೇಳಿದ್ದು ಹೀಗೆ-” ದ ಬಾಲ್ ವುಡ್ ಹೇವ್ ಡೆಫಿನಿಟ್ಲಿ ಮಿಸ್ಸ್ದ್ ದ ಲೆಗ್ ಸ್ಟಂಪ್ ಅಂಡ್ ದ ಆಫ್ ಸ್ಟಂಪ್;…….ಇಟ್ ವುಡ್ ಹೇವ್ ಹಿಟ್ ದ ಮಿಡ್ಲ್ ಸ್ಟಂಪ್ !!” – ಈ ಶಾಸ್ತ್ರಿ ಕೂಡ ಈಗ ಒಳ್ಲೆಯ ಕ್ರಿಕೆಟ್ ಅನಲಿಸ್ಟ್ ಮತ್ತು ಸ್ಟ್ರೆಟೆಜಿಸ್ಟ್ ಹೌದು. ಆದರೆ ಅವನ ಕಾಲದಲ್ಲಿ ಯಾರಾದರೂ ತುಂಬ ನಿಧಾನವಾಗಿ ಏನನ್ನಾದರೂ ಮಾಡಿದರೆ ಶಾಸ್ತ್ರಿ ಬ್ಯಾಟಿಂಗ್ ಹಾಗೆ ಎನ್ನಲಾಗುತ್ತಿತ್ತು. ಆದರೆ ಶಾಸ್ತ್ರಿ ಮೇಲೆ ಪಕ್ಷಪಾತದ ಆರೋಪ ಇಲ್ಲ.

೧೯೮೩ರ ಪ್ರುಡೆಂಶಿಯಲ್ ವಿಶ್ವಕಪ್ ಗೆದ್ದದ್ದು ಭಾರತದ ಕ್ರಿಕೆಟಿನಲ್ಲಿ ದೊಡ್ದ ಸಾಧನೆ ಮಾತ್ರವಲ್ಲ, ಭಾರತದಲ್ಲಿ ಕ್ರಿಕೆಟ್ ಇಷ್ಟು ಜನಪ್ರಿಯ ಆಗಲು ಮುಖ್ಯ ಕಾರಣವಾಯಿತು. ಆ ಗೆಲುವಿನ ಶ್ರೇಯಸ್ಸು ಕಪಿಲ್ ದೇವನಿಗೆ ಸಲ್ಲಬೇಕು. ಆ ಟೂರ್ನಿಯಲ್ಲಿ ಭಾರತ ಮೊದಲ ಬಾರಿಗೆ ಉತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿತು. ಅದಕ್ಕಿಂತ ಕೆಲ ವರ್ಷಗಳ ಹಿಂದೆ ಸೋಲ್ಕರ್ ನ ಬ್ಯಾಟ್ ಬಳಿಯ ಫೀಲ್ಡಿಂಗ್ ಮಾತ್ರ ವಿಶ್ವದ ಗಮನ ಸೆಳೆದಿತ್ತು. ಯಶ್ಪಾಲ್ ಶರ್ಮ, ರೋಜರ್ ಬಿನ್ನಿಯಂಥವರ ಫೀಲ್ಡಿಂಗ್ ಹೆಸರು ಮಾಡಿತ್ತು. ರಿಚರ್ಡ್ಸ್ ನ ಕ್ಯಾಚೊಂದನ್ನು ಹಿಡಿದ ಕಪಿಲನಿಗೆ ಬೆಂದ ಬಿಸಿ ಬಟಾಟೆಯನ್ನು ಹಿಡಿದಂತಾಗಿತ್ತಂತೆ. ಅಂತಿಮ ಪಂದ್ಯದಲ್ಲಿ ೬೦ ಓವರುಗಳಲ್ಲಿ ಕೇವಲ ೧೪೩ ರನ್ನುಗಳ ಬೆಂಬತ್ತಿದ ವಿಂಡೀಸ್ ತಂಡ, ಮೊಹಿಂದರ್ ಅಮರನಾಥನ ಬಾಲಿಗೆ ಹೋಲ್ಡಿಂಗ್ ಎಲ್.ಬಿ.ಡಬ್ಲು. ಆಗುವುದರೊಂದಿಗೆ ಆಲೌಟಾದುದು ಮಾತ್ರವಲ್ಲ, ಅದರಿಂದಾಗಿ, ಹೊಸ , ಅದ್ಭುತ ವಾಣಿಜ್ಯ ಅವಕಾಶಗಳಿರುವ ದೇಶವೊಂದು ಕ್ರಿಕೆಟಿನಲ್ಲಿ ಎದ್ದು ಬರುವಂತಾಯಿತು. ಬಹುಶ ನಮ್ಮ ದೇಶದಲ್ಲಿ ಕ್ರಿಕೆಟ್ ಹೆಚ್ಚು ವಾಣಿಜ್ಯೀಕರಣಗೊಂಡುದು, ವಾಣಿಜ್ಯ ಸಂಸ್ಥೆಗಳ ನಡುವಿನ ಪೈಪೋಟಿಯ ಸಂಗತಿಯಾದುದು ಅಲ್ಲಿಂದ. ಅಲ್ಲಿವರೆಗೆ ಪ್ರುಡೆಂಶಿಯಲ್ ವಿಶ್ವಕಪ್ ಆಗಿದ್ದುದು ಆನಂತರ ಬೇರೆ ಬೇರೆ ವಾಣಿಜ್ಯ ಸಂಸ್ಥೆಗಳ ಹೆಸರಲ್ಲಿ ಬರಲಾರಂಭಿಸಿತು. ಭಾರತದ ಮಟ್ಟಿಗೆ ಮುಂಚೂಣಿಯಲ್ಲಿದ್ದ ರಿಲಯನ್ಸ್ ಕಂಪೆನಿ ಒಂದು ವಿಶ್ವಕಪ್ಪನ್ನು ಪ್ರಾಯೋಜಿಸಿತು.

ಸಣ್ಣ ವಯಸ್ಸಿನಿಂದಲೇ ಕ್ರಿಕೆಟ್ ಕಮೆಂಟ್ರಿ ಕೇಳಲು ಶುರು ಮಾಡಿದ್ದರಿಂದ ನನಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಅರ್ಥ ಮಾಡಿಕೊಳ್ಳಲು ತುಂಬ ಪ್ರಯೋಜನವಾಗಿದೆ. ಉದಾಹರಣೆಗೆ ಬೈಸೆಕ್ಟ್ ಎಂಬ ಇಂಗ್ಲಿಷ್ ಪದವನ್ನು ಮೊದಲು ಕೇಳಿ ನಾನು ಅರ್ಥ ಮಾಡಿಕೊಂಡದ್ದು ಕಮೇಂಟ್ರಿಯಿಂದಲೇ ಎನ್ನುವುದು ನನಗೆ ಈಗಲೂ ಸರಿಯಾಗಿ ನೆನಪಿದೆ. ಅದು ಜಿ.ಆರ್. ವಿಶ್ವನಾಥ್ ಮದ್ರಾಸಿನ ಒಂದು ಟೆಸ್ಟಿನಲ್ಲಿ ೨೨೧ ರನ್ನು ಮಾಡಿದ ಇನ್ನಿಂಗ್ಸ್ ನಲ್ಲಿ ಒಮ್ಮೆ ವೀಕ್ಷಕವಿವರಣೆಗಾರ ಹೇಳಿದ್ದು– “ಹಿ ಬೈಸೆಕ್ಟೆಡ್ ಟೂ ಫೀಲ್ಡರ್ಸ್ಅಂತ.ಇಂಥ ಎಷ್ಟೋ ಪದಗಳನ್ನು ನಾನು ಕಲಿತದ್ದು ರೇಡಿಯೋ ವೀಕ್ಷಕವಿವರಣೆಯಿಂದ. ಆದರೆ ಕ್ರಿಕೆಟ್ ಕಮೆಂಟ್ರಿಯಿಂದ ನಾನೆಷ್ಟು ಕಳೆದುಕೊಂಡಿರಬಹುದು ಎನ್ನುವುದನ್ನು ನಾಳೆ ಪಬ್ಲಿಕ್ ಪರೀಕ್ಷೆ , ಇಂದಾದರೂ ಆ ರೇಡಿಯೋ ಕರೇಲಿ ಮಡುಗಿ ರಜ್ಜ ಓದು ಅಂತ ಪದೇ ಪದೇ ಪದವಿ ಮುಗಿವವರೆಗೂ ನೆನಪಿಸುತ್ತಿದ್ದ ನನ್ನ ಅಮ್ಮ ಅಜ್ಜಿಯರನ್ನು ಕೇಳಿದರೆ ಗೊತ್ತಾದೀತು. ಆಗಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ ಭಾರತ ಅಥವಾ ಕರ್ನಾಟಕ ತಂಡ ಕ್ರಿಕೆಟಿನಲ್ಲಿ ಗೆದ್ದಾಗ ಬಚಾವ್ ಅಂತ ಸಮಾಧಾನವಾಗುತ್ತಿತ್ತು.ಸೋತರೆ ಹೆಚ್ಚು ದುಃಖವಾಗುತ್ತಿರಲಿಲ್ಲ.ಹಾಗೆ ಸೋತಾಗಲೆಲ್ಲ ನಾವು ಸಮಾಧಾನ ಮಾಡಿಕೊಳ್ಳುತ್ತಿದ್ದುದು ಹೀಗೆ– ” ಭಾರತ ಗೆದ್ದರೆ ಅಕ್ಕಿಗೇನು ರೇಟು ಕಡಿಮೆ ಆಗ್ತದೋ ಅಥವಾ ಅಡಿಕೆಗೆ ರೇಟು ಜಾಸ್ತಿ ಆಗ್ತದೋ“- ಅಂತ! ಭಾರತ ಸೋತರೆ ವೈರಾಗ್ಯ ನನಗೆ.

ಕಮೆಂಟ್ರಿಯಿಂದ ಭಾಷೆ ಕಲಿಯಲು ಸಹಾಯವಾದರೂ ಆಗುತ್ತದೆ, ಆದರೆ ಟಿ.ವಿ.ಯಿಂದ ಅಂಥ ಪ್ರಯೋಜನವಾಗಲಿಕ್ಕಿಲ್ಲ. ಇಂದು ಕ್ರಿಕೆಟ್ ಇಷ್ಟು ಜನಪ್ರಿಯ ಆದದ್ದು ಮತ್ತು ವಾಣಿಜ್ಯೀಕರಣಗೊಂಡುದು ಟಿ.ವಿ.ಯಿಂದಲೇ ಅನ್ನುವುದು ನಿಜ. ಅದನ್ನು ಹೇಸಿಗೆಯಾಗುವಷ್ಟು ವಾಣಿಜ್ಯೀಕರಣಗಿಳಿಸಿದವನು ನಮ್ಮ ಐ.ಪಿ.ಎಲ್. ಲಲಿತ್ ಮೋದಿ.

ದೊಡ್ಡ ಉದ್ಯಮಿಗಳು ಹಣ ಹೂಡುವ ವೇದಿಕೆಯಾಗಿ ಕ್ರಿಕೆಟ್ ಪಂದ್ಯಾವಳಿ ರೂಪುಗೊಂಡಾಗ ಹುರಿದುಂಬಿಗಳು( ಚೀರ್ ಗರ್ಲ್ಸ್) ಕುಣಿಯಲಾರಂಬಿಸಿದರು.ಅದಕ್ಕಿಂತ ಹೆಚ್ಚಾಗಿ ಬೇಂದ್ರೆಯವರು ಹೇಳುವಂತೆ ಕುರುಡುಕಾಂಚಾಣ ಕುಣಿಯಲಾರಂಭಿಸಿತು.ವಿಜಯ ಮಲ್ಯ,ನೀತಾ ಅಂಬಾನಿಯಂಥವರು ಮೈದಾನದಲ್ಲಿ ಬೊಬ್ಬೆ ಹೊಡೆದು, ಆಟಗಾರರನ್ನು ಅಪ್ಪಿ ಕುಣಿದಾಡುತ್ತಾರೆ ಎಂದರೆ ಅದಕ್ಕೆ ನಮ್ಮಂಥ ಅಮಾಯಕರಿಗೆ ಕ್ರಿಕೆಟ್ ಬಗ್ಗೆ ಇರುವಂಥ ಹುಚ್ಚು ಪ್ರೀತಿ ಮಾತ್ರ ಕಾರಣವಲ್ಲ. ಅದು ಜಾಹಿರಾತಿನ ಖರ್ಚಿಲ್ಲದೆ ಕೋಟ್ಯಂತರ ಜನರನ್ನು ತಲುಪುವ ದಾರಿಯು ಹೌದು. ಹಣ ಮತ್ತು ಪ್ರಭಾವಗಳ ಅಸಹ್ಯ ಪ್ರದರ್ಶನವೂ ಹೌದು. .ಪಿ.ಎಲ್ಲಿನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಯ ಹದಿನೈದು ಚೆಂಡುಗಳಲ್ಲಿ ಅದ್ಭುತವಾಗಿ ಆಡಿ ನಲವತ್ತಕ್ಕಿಂತಲೂ ಹೆಚ್ಚು ರನ್ನು ಗಳಿಸಿ ಸೆಮಿಫೈನಲಿಗೆ ಅರ್ಹತೆ ಗಳಿಸಿದಾಗ ಚೆನ್ನೈ ತಂಡದ ನಾಯಕ ಧೋನಿ ಹೇಳಿದ ಮಾತು ಮಾರ್ಮಿಕವಾಗಿತ್ತು.-“ನಮ್ಮ ಮಾಲಿಕರು ನಮ್ಮ ಮೇಲೆ ಇಷ್ಟು ಹಣ ಹೂಡಿರುವಾಗ ಗೆಲ್ಲಲೇಬೇಕಾದುದು ನಮ್ಮ ಕರ್ತವ್ಯ“. ಹೀಗೆ ದೇಶಕ್ಕಾಗಿ, ತಂಡಕ್ಕಾಗಿ,ಆಟದ ಮೇಲಿನ ಪ್ರೀತಿಗಾಗಿ ಎಂಬ ಮಾತುಗಳ ಬದಲಾಗಿ ಹಣಕ್ಕಾಗಿಎಂಬ ಹೊಸ ನುಡಿಗಟ್ಟು ಬಂದುದು ಐ.ಪಿ.ಎಲ್. ವೈಶಿಷ್ಟ್ಯ.

ಕ್ರೀಡೆಗಳ ಅಂಕಿಅಂಶ ಪ್ರಿಯರಿಗೆ ಕ್ರಿಕೆಟ್ ಆಟದಷ್ಟು ಆಹಾರ ಒದಗಿಸುವ ಬೇರೆ ಆಟವಿಲ್ಲ. ನೀವೂ ಅಂಕಿಅಂಶ ಪ್ರಿಯರಾದರೆ ಈ ಮುಂದಿನ ಅಂಕಿಅಂಶಗಳನ್ನು ನೋಡಿ; ೫೭ ಪಂದ್ಯಗಳು, ೧೭೧ ಗಂಟೆಗಳ ಕ್ರಿಕೆಟ್,೫೪ ಪಾರ್ಟಿಗಳು, ೨೭೦ ಗಂಟೆಗಳ ಮೇಜವಾನಿ, ,೨೯,೦೦೦ ಬಾಟಲಿ ಬೀರು, ೨೭,೦೦೦ ಬಾಟಲಿ ವಿಸ್ಕಿ,,ಪ್ರತಿ ಪಾರ್ಟಿಯಲ್ಲಿ ಸರಾಸರಿ ೫೦೦ ಮಂದಿ, ಪ್ರತಿರಾತ್ರಿ ಸರಾಸರಿ ೩೨ ವಸ್ತ್ರವಿನ್ಯಾಸಗಳ( ಮತ್ತು ದೇಹದ ) ಪ್ರದರ್ಶನ. ಹೌದು.ಇದು ಐ.ಪಿ.ಎಲ್.ಕೊನೆ ಹಂತಕ್ಕಾಗುವಾಗ ಮಾಧ್ಯಮಗಳಲ್ಲಿ ಗಮನಸೆಳೆದ ಒಂದು ಅಂಕಿಅಂಶ. ಇದೇ ಐ.ಪಿ.ಎಲ್. ವಿಶೇಷತೆ. .ಪಿ.ಎಲ್ ನಲ್ಲಿ ಹೆಚ್ಚು ಆಟ ನಡೆದದ್ದು ಮೈದಾನದ ಹೊರಗೆಯೇ. ಈ ಬಾರಿಯ ಐ.ಪಿ.ಎಲ್. ಪಂದ್ಯಾವಳಿಯಲ್ಲಿ ಧೋನಿಯ ಚೆನ್ನೈ ತಂಡ ಗೆದ್ದಿತು. ಆದರೆ ಒಟ್ಟಾರೆಯಾಗಿ ಸೋತದ್ದು ಯಾರು? ನಿಜವಾಗಿ ಸೋತದ್ದು ಯಾರೆಂದರೆ, ಹಣ ಹೆಣ್ಣು ಹೆಂಡ ಜೂಜುಗಳ ನಡುವೆ ಕಳೆದು ಹೋದ ಕ್ರಿಕೆಟ್ ಮತ್ತು ಆ ಕ್ರಿಕೆಟಿಗಾಗಿ ತಮ್ಮೆಲ್ಲ ಶ್ರಮ ಮತ್ತು ಸಮಯ ವ್ಯಯಿಸುವ ಕೋಟ್ಯಂತರ ಕ್ರಿಕೆಟ್ ಹುಚ್ಚರು !!

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಏಪ್ರಿಲ್ 14, 2010

ಈ ವಾರ ಮಾರುಕಟ್ಟೆಗೆ ಬಂದಿರುವ ನನ್ನ ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಎಂಬ ಪುಸ್ತಕದ ಕೆಲವು ಭಾಗಗಳು.

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿಹೊಸ ಕನ್ನಡವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.

ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.

ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ.” ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.

ಒಟ್ಟಿನಲ್ಲಿ ಭಾಷಾಪ್ರೇಮ ಭಾಷಾನೀತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ತಮಿಳು ಭಾಷಿಗರು ನಮಗಾಗಲೀ ಯಾರಿಗೇ ಆಗಲೀ ಆದರ್ಶ ಅಥವಾ ಮಾದರಿ ಆಗಬಾರದು.ಶಾಸ್ತ್ರೀಯ ಭಾಷೆಯ ವಿಚಾರದಲ್ಲಿ ಮತ್ಸರದಿಂದ ಕನ್ನಡಕ್ಕೆ ಆ ಸ್ಥಾನಮಾನ ಸಿಗಬಾರದೆಂದು ನ್ಯಾಯಾಲಯದಲ್ಲಿ ಕೂಡ ಪಿತೂರಿ ಮಾಡುವ ಮನೋಭಾವ ತಮಿಳರದ್ದು. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ತೆವಲೇನೂ ಅಲ್ಲ ಅನ್ನುವುದು ಯಾರಿಗಾದರೂ ಅರ್ಥವಾದೀತು.ತಮಿಳನ್ನು ಮಾದರಿಯಾಗಿ ಇಟ್ಟುಕೊಳ್ಳುವ ಡಾ.ಡಿ.ಎನ್.ಎಸ್. ಅಲ್ಲಿ ಉಚ್ಚಾರಣೆಗೂ ಬರಹಕ್ಕೂ ಇರುವ ವ್ಯತ್ಯಾಸಗಳನ್ನು ತೊಂದರೆದಾಯಕ ಎಂದುಕೊಳ್ಳುವುದಿಲ್ಲ.ತಮಿಳಿನಲ್ಲಿ ಕನ್ನಡದ ಹಾಗೆ ಸ್ಪೆಲ್ಲಿಂಗ್ ಸಮಸ್ಯೆ ಇಲ್ಲ ಎಂದು ತಪ್ಪಾಗಿಯೆ ಹೇಳುತ್ತಾರೆ. ಹಾಗೆ ನೊಡಿದರೆ ಮಾತಾಡಿದಂತೆ ಬರೆಯ ಬೇಕಾದರೆ ತಮಿಳಿನಲ್ಲಿ ಇನ್ನೂ ಅನೇಕ ಅಕ್ಷರಗಳನ್ನು ಸೇರಿಸಬೇಕಾಗುತ್ತದೆ. ಉಚ್ಚಾರವೈವಿಧ್ಯವಿದ್ದು ಅಕ್ಷರಗಳ ಸಂಖ್ಯೆ ಕಡಿಮೆಯಿದ್ದಷ್ಟೂ ಸ್ಪೆಲ್ಲಿಂಗ್ ಸಮಸ್ಯೆ ಹೆಚ್ಚು ಎನುಉವುದು ನಮಗೆ ಇಂಗ್ಲಿಷನ್ನು ನೋಡಿಯಾದರೂ ಅರ್ಥವಾಗಬೇಕು. ಕನ್ನಡದಲ್ಲಿರುವ ಕೆಲವು ಅಕ್ಷರಗಳನ್ನು ತೆಗೆದುಹಾಕುವುದರಿಂದ ಇಂದು ಮೇಲ್ವರ್ಗದವರು ಬರಹಮೂಲಕ ಪಡೆಯುತ್ತಿರುವ ಸೌಲಭ್ಯವನ್ನು ಕೆಳವರ್ಗದವರೂ ಪಡೆಯುವಂತಾಗುತ್ತದೆ ಎನ್ನುವುದು ಡಾ. ಡಿ.ಎನ್.ಎಸ್. ನಿಲುವು.ಆದರೆ ಅವರೇ ಬರೆದ ವಾಕ್ಯ ಈ ಮುಂದಿನದು-” ಬೇರೆ ಭಾಷೆಯ ಲಿಪಿ ಕಲಿಯಬೇಕೆಂದರೆ ಕೆಲವೇ ತಾಸುಗಳಲ್ಲಿ ಕಲಿಯಬಹುದು.” ಅವರೇ ಹೇಳುವ ಮುಂದಿನ ಮಾತುಗಳನ್ನು ಗಮನಿಸಿ.-” ತೆಲುಗು ಭಾಷೆಯನ್ನು ಕಲಿಯಬೇಕೆಂಬ ಇಚ್ಛೆಯುಳ್ಳ ಕನ್ನಡಿಗನು ಅರ್ಧಗಂಟೆಯೊಳಗೆ ಅದರ ಲಿಪಿಯನ್ನು ಕೈವಶ ಮಾಡಿಕೊಳ್ಳಬಲ್ಲನು.” ಇನ್ನೊಂದು ಕಡೆ ಅವರು ಹೇಳುವ ಮಾತುಗಳನ್ನು ನೋಡಿ-” ನಿಜಕ್ಕೂ ಒಂದು ಭಾಷೆಯನ್ನು ಕಲಿಯುವ ಅವಶ್ಯಕತೆ ಬಂದರೆ ಚೀನೀ ಭಾಷೆಗಿರುವಂಥ ಅತೀ ಕ್ಲಿಷ್ಟವಾದ ಲಿಪಿಯನ್ನೂ ಜನ ಅರಗಿಸಿಕೊಂಡಾರು.ಬೇಡವಾಗಿರುವ ಭಾಷೆಯ ಲಿಪಿ ಸಮಾನವಾಗಿದ್ದರೂ ಒಂದೇ ವಿಭಿನ್ನವಾಗಿದ್ದರೂ ಒಂದೇ.”

ಡಾ.ಡಿ.ಎನ್.ಎಸ್. ಅವರ ವಾದದಲ್ಲಿರುವ ವೈರುಧ್ಯವನ್ನು ಗುರುತಿಸುವುದು ಕಷ್ಟವಲ್ಲ. ಅವರೆನ್ನುವಂತೆ ಅವರ ಹೊಸ ಬರಹವನ್ನು ಓದಿ ಅಭ್ಯಾಸವಾದವರಿಗೆ ಹಳೆ ಬರಹಗಳಲ್ಲಿರುವ ಗ್ರಂಥಗಳನ್ನು ಓದಲು ಜಾಸ್ತಿ ಕಷ್ಟವಾಗಲಾರದು. ಒಂದೆರಡು ಗಂಟೆಗಳಲ್ಲೇ ಅವರು ಅದನ್ನು ಸಾಧಿಸಿಕೊಳ್ಳಬಲ್ಲರು.” ಹಾಗಿದ್ದರೆ ಈಗಿರುವ ಹಳೆ ಬರಹ ಕಲಿಯಲು ಕಷ್ಟವೆಂದು ಅವರು ಹೇಗೆ ತೀರ್ಮಾನಿಸುತ್ತಾರೆ? ಕೆಳವರ್ಗಗಳಿಗೆ ಕಲಿಕಾಸಾಮರ್ಥ್ಯ ಇಲ್ಲ ಎನ್ನುವ ಡಾ.ಡಿ.ಎನ್.ಎಸ್. ರ ಪರೋಕ್ಷ ನಂಬಿಕೆಯೇ ಪ್ರಶ್ನಾರ್ಹವಾದುದು.

ವರ್ಗ ಪ್ರಜ್ಞೆ ಅತಿ ಹೆಚ್ಚಾಗಿರುವ ಕೇರಳದಲ್ಲಿ ಅಕ್ಷರಗಳ ಸಂಖ್ಯೆ ತುಂಬ ಜಾಸ್ತಿ. ಅಲ್ಲಿ ಅಕ್ಷರಸ್ತರ ಪ್ರಮಾಣ ತಮಿಳುನಾಡಿಗೆ ಹೋಲಿಸಿದರೆ ತುಂಬ ಹೆಚ್ಚು.ಕಲೆಸಾಹಿತ್ಯದಲ್ಲೂ ಕೇರಳ ತಮಿಳುನಾಡಿಗಿಂತ ತುಂಬ ಮುಂದಿದೆ. ಕೆಳವರ್ಗದವರು ಶಾಲೆಗೆ ಹೋಗುವುದರಿಂದ ಮತ್ತು ಬರಹ ಕಲಿಯುವುದರಿಂದ ವಂಚಿತರಾಗಿದ್ದರೆ ಅದಕ್ಕೆ ಭಾಷೇತರವಾದ ಸಾಮಾಜಿಕಆರ್ಥಿಕ ಕಾರಣಗಳಿವೆ.ಕನ್ನಡದಲ್ಲಿ ಮೂವತ್ತೊಂದೇ ಅಕ್ಷರಗಳಾದರೆ ಕೆಳವರ್ಗದ ಕೀಳರಿಮೆ ಕಡಿಮೆಯಾದೀತು ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ.ವಾಸ್ತವವಾಗಿ ಇದರಿಂದ ಮತ್ತಷ್ಟು ಕೀಳರಿಮೆಯಾದೀತು.ಮೂವತ್ತೊಂದು ಅಕ್ಷರದವರು ಐವತ್ತೊಂದು ಅಕ್ಷರ ತಿಳಿದವರ ಎದುರು ಮತ್ತಷ್ಟು ಕುಬ್ಜರಾಗಬೇಕಾದೀತು.

ಒಟ್ಟಿನಲ್ಲಿ ಡಾ. ಡಿ.ಎನ್.ಎಸ್. ಯೋಜನೆಯು, “ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಸುಲಭ ಉಪಾಯವೆಂದರೆ ಬಡತನ ರೇಖೆಯನ್ನೇ ಸ್ವಲ್ಪ ಕೆಳಗೆ ಮಾಡುವುದುಎನ್ನುವಂತಿದೆ. ಚರ್ಚೆಗೆ ಸ್ವಾಗತ. ಇತಿ, ಅಜಕ್ಕಳ ಗಿರೀಶ.

ಕನ್ನಡಕ್ಕೇಕೆ ಕತ್ತರಿ?

ಮಾರ್ಚ್ 31, 2010

ಈ ವಾರ ಮಾರುಕಟ್ಟೆಗೆ ಬಂದಿರುವ ನನ್ನ ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಎಂಬ ಪುಸ್ತಕದ ಒಂದೆರಡು ಪುಟಗಳು.

ಯಾವುದು ಪರಂಪರೆಸಂಸ್ಕೃತಿ? 

ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿಹೊಸ ಕನ್ನಡವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.

ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.

ಹತ್ತನೇ ಶತಮಾನದ ಹಳೆಗನ್ನಡಕ್ಕೆ ಹೋಗಬೇಕು ಎಂದು ಅವರು ಪ್ರತಿಪಾದಿಸುತ್ತಾರೆ.ಇದು ಕನ್ನಡದ್ದೇ ಆದ ಸಂಸ್ಕೃತಿಯನ್ನು ಉಳಿಸುವ ಯತ್ನಎನ್ನುತ್ತಾರೆ.ಹತ್ತನೇ ಶತಮಾನಕ್ಕೇ ಯಾಕೆ ಹೋಗಬೇಕು? ಇನ್ನಷ್ಟು ಹಿಂದೆ ಯಾಕೆ ಹೋಗಬಾರದು ಎಂಬ ಪ್ರಶ್ನೆಯನ್ನೂ ಅವರಂತೆಯೇ ಕೇಳಲು ಸಾಧ್ಯವಿದೆ.ಇಂಥ ವಾದವು ನಮ್ಮನ್ನು ಎಲ್ಲಿಗೂ ಕೊಂಡೊಯ್ಯಲಾರದು ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಯೋಚಿಸಬೇಕಾದದ್ದೆಂದರೆ , ನಾವು ಪಡೆದಪರಂಪರೆ ಅಥವಾ ಸಂಸ್ಕೃತಿಎಂದರೆ ಯಾವ ಕಾಲದ್ದು, ಯಾರ ಕಾಲದ್ದು ಎನ್ನುವುದನ್ನು. ಅಂದರೆ ಯಾವುದನ್ನು ನಾವು ನಮ್ಮ ಪರಂಪರೆ , ನಮ್ಮ ಸಂಸ್ಕೃತಿ ಎನ್ನಬೇಕು ಎನ್ನುವುದೇ ಮುಖ್ಯ ಪ್ರಶ್ನೆ.ಭಾಷೆಗೆ ಸಂಬಂಧಿಸಿದಂತೆ , ಶತಮಾನಗಳಷ್ಟು ಹಿಂದಿನದನ್ನು ನಮ್ಮ ಪರಂಪರೆ, ಸಂಸ್ಕೃತಿ ಎನ್ನುವಾಗ ಸ್ಥಳಾಂತರ, ಮತಾಂತರ, ವಲಸೆ ಇತ್ಯಾದಿಗಳಿಂದಾಗಿ ಹಲವರ ಮಾತೃಭಾಷೆಗಳೇ ಇಂದು ಬದಲಾಗಿ ಹೋಗಿರಬಹುದು ಎನ್ನುವುದನ್ನೂ ನೆನಪು ಮಾಡಿಕೊಳ್ಳಬೇಕು.ನಮ್ಮ ತಾಯ್ನುಡಿ ಎಂದರೆ ಯಾವುದು? ನಾವು ನಮ್ಮ ತಾಯಿ ತಂದೆಯರಿಂದ ಅಥವಾ ಅಜ್ಜ ಅಜ್ಜಿಯರಿಂದ ಪಡೆದುದೇ ಅಥವಾ ಸಾವಿರ ವರ್ಷಗಳ ಹಿಂದೆ ಈ ಭೂಭಾಗದಲ್ಲಿ ವಾಸವಾಗಿದ್ದವರು( ಅವರು ನಮ್ಮ ಪೂರ್ವಜರೇ ಆಗಿರಬೇಕೆಂದಿಲ್ಲ ಕೂಡ) ಬಳಸುತ್ತಿದ್ದ ನುಡಿಯೇ? ಹತ್ತನೇ ಶತಮಾನದಲ್ಲಾದರೂ ಡಿ.ಎನ್.ಎಸ್. ಬಳಸುವ ಶುದ್ಧ ಕನ್ನಡ ಬಳಕೆಯಲ್ಲಿತ್ತೇ? ಅವರ ನಿಲುವು ಕನ್ನಡ ಲಿಖಿತ ಪರಂಪರೆ ಅಥವಾ ಲಿಖಿತ ಸಂಸ್ಕೃತಿಯನ್ನೇ ನಿರಾಕರಿಸುವ ನಿಲುವಲ್ಲವೇ? ಹಾಗೆ ನೋಡಿದರೆ ಕನ್ನಡ ವರ್ಣಮಾಲೆಯ ಪರಂಪರೆಯೇ ಸಂಸ್ಕೃತ ಮೂಲದ್ದು ತಾನೇ?

ಕನ್ನಡ ಬರಹವನ್ನು ಮಹಾಪ್ರಾಣ ಇತ್ಯಾದಿಗಳುಳ್ಳ ಈಗಿನ ಸ್ವರೂಪದಲ್ಲಿ ಅನೇಕ ಶತಮಾನಗಳ ಹಿಂದೆ ಕೆಲವು ಪಂಡಿತರು ಪ್ರಜ್ಞಾಪೂರ್ವಕವಾಗಿಯೇ ಆರಂಭಿಸಿರಬಹುದು.ಆದರೆ ಇಂದು ನಮಗೆ ಅದು ಅಪ್ರಜ್ಞಾಪೂರ್ವಕ ರೂಢಿಯ ಮೂಲಕ ಬಂದುದು.ಇದನ್ನು ತಕ್ಷಣಕ್ಕೆ ಹಠ ಹಿಡಿದು ಬದಲಾಯಿಸುವುದೆಂದರೆ ರೂಢಿಯನ್ನೂ ಪರಂಪರೆಯನ್ನೂ ತಿರಸ್ಕರಿಸಿದಂತೆ. ಕೆ.ವಿ.ತಿರುಮಲೇಶ್ ಹೇಳುವಂತೆ,” ಕನ್ನಡದ ಮಟ್ಟಿಗಾದರೆ ಅದೊಂದು ಭಾಷೆಯಾಗಿ ಇತಿಹಾಸದಲ್ಲಿ ಕಾಣಿಸಿಕೊಂಡಾಗಲೇ ಅದರಲ್ಲಿ ಮಹಾಪ್ರಾಣಗಳು, ,ಷ ಮುಂತಾದವು ಇದ್ದವುಅವು ಸಂಸ್ಕೃತದಿಂದ ಬಂದುವು ಎನ್ನುವುದು ಕೇವಲ ಪ್ರಾಸಂಗಿಕ.ಇವುಗಳನ್ನೆಲ್ಲ ಕಿತ್ತು ಹಾಕುವುದೆಂದರೆ ಅದರ ಮೂಳೆ ಮುರಿದಂತೆಯೇ ಸರಿ. ಇವು ಸಹಜವಾಗಿ ಹೊರಟು ಹೋದರೆ ಅದು ಬೇರೆ ಮಾತು; ಆದರೆ ರಾಜಕೀಯಪ್ರೇರಿತವಾದ ನಿರ್ಮಿತ ಸತ್ಯವಾದರೆ ಅದು ಖಂಡನೀಯ……”

ಕನ್ನಡದಲ್ಲಿ ಮಹಾಪ್ರಾಣ ಅಕ್ಷರಗಳನ್ನು ಯಾರೂ ಉಚ್ಚರಿಸುವುದಿಲ್ಲ ಎಂಬುದು ಸರಿಯಲ್ಲ. ಕರಾವಳಿಯಲ್ಲಿ ಬಹಳ ಮಂದಿ ಉಚ್ಚರಿಸುತ್ತಾರೆ.ಧಾರವಾಡ, ಗುಲ್ಬರ್ಗ ಕಡೆ ಎಜುಕೇಟೆಡ್ ಮಂದಿ ಬಳಸುತ್ತಾರೆ ಎಂಬುದನ್ನು ಡಿ.ಎನ್.ಎಸ್. ಅವರೇ ಹೇಳುತ್ತಾರೆ. ಮಹಾಪ್ರಾಣಗಳನ್ನು ತೆಗೆಯುವುದೆಂದರೆ ಈಗ ಬಳಸುವವರ ಸ್ವಾತಂತ್ರ್ಯದ ಅಪಹರಣ.ಇದು ವಿವರಣಾತ್ಮಕ ವ್ಯಾಕರಣವೇ? ಅನುಶಾಸನಾತ್ಮಕವೇ? ಅವರದ್ದು ಪ್ರಿಸ್ಕ್ರಿಪ್ಟಿವ್ ಗ್ರಾಮ್ಮರ್ಆಗಿದೆ. ತತ್ಪೂರ್ವದ ಚರಿತ್ರೆಯನ್ನು ದಾಟಿ ಶತಮಾನಗಳಷ್ಟು ಹಿಂದೆ ಹೋಗಿ ಅದೇ ನಮ್ಮ ಸಂಸ್ಕೃತಿ, ಸೊಗಡು, ಸ್ವಂತಿಕೆ; ಅದನ್ನು ಮರುಸ್ಥಾಪಿಸಬೇಕು ಎಂದು ವಾದಿಸುವುದೆಂದರೆ ಇಂದು ನಮ್ಮ ದೇಶದಲ್ಲಿರುವ ಹಲವು ಮತಧರ್ಮೀಯರನ್ನು ಆಯಾ ಮತಧರ್ಮಗಳನ್ನು ಬಿಟ್ಟುಬಿಡಿರಿ ಎಂದು ಹೇಳಿದಂತಾಗುತ್ತದೆ. ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದ ಒಂದು ಸಂಸ್ಕೃತಿಯನ್ನು ಬಿಟ್ಟು ಮರುಮತಾಂತರವಾಗಬೇಕೆಂದು ಶಂಕರ ಭಟ್ಟರ ವಾದವು ಒತ್ತಾಯಿಸುತ್ತದೆ.

ಆದಷ್ಟು ಕನ್ನಡದ್ದೇ ಪದಗಳನ್ನೇ ಬಳಸಬೇಕು ಎನ್ನುವುದರಲ್ಲಿ ತಪ್ಪೇನೂ ಇಲ್ಲ. ಆದರೆ ದಿನನಿತ್ಯದ ಬಳಕೆಯಲ್ಲಿ ಸೇರಿ ಹೋದ ಕಾಲ, ಕಾರಣ, ಪ್ರಮಾಣ, ಚಾಲಕ, ಕೃತಿ ,ಲೇಖನ, ಶಕ್ತಿ, ಬಲ, ಮುಖ, ಆರತಿ, ದ್ರವ ಮುಂತಾದ ಪದಗಳಿಗೆ ಕನ್ನಡ ಪದಗಳನ್ನು ಹುಡುಕಿ ತೆಗೆದರೂ ಈ ಪದಗಳಿಗೆ ಇಂದು ನಾವು ಹೊಂದಿರುವ ಎಲ್ಲ ಅರ್ಥಛಾಯೆಗಳೂ ಆ ಹೊಸ ಪದಗಳಿಗೆ ಬರಬೇಕಾದರೆ ಪ್ರತಿ ಪದದ ಜೊತೆ ಸಂಸ್ಕೃತಮೂಲ ಪದವನ್ನು ನೀಡಬೇಕಾಗಿ ಬಂದೀತು. ಇವುಗಳಿಗೆ ಹೊಸ ಪದಗಳನ್ನು ಟಂಕಿಸುವುದು ಅನಾವಶ್ಯಕ ಶ್ರಮ.

ಡಾ.ಡಿ.ಎನ್.ಎಸ್. ಅವರು ಕನ್ನಡ ವ್ಯಾಕರಣ ಯಾಕೆ ಬೇಕು? ” ಎಂಬ ತಮ್ಮ ಪುಸ್ತಕದ ಕೊನೆಯಲ್ಲಿ ಕೆಲವು ಪದಗಳ ಅರ್ಥಗಳನ್ನು ನೀಡಿದ್ದಾರೆ.ಅಲ್ಲಿ ಕನ್ನಡದ್ದೇ ಪದಗಳಿಗೆ

ಸಂಸ್ಕೃತ ಎರವಲು ಪದಗಳು ಮತ್ತು ಇಂಗ್ಲಿಷ್ ಪದಗಳ ಮೂಲಕ ಅರ್ಥ ಕೊಟ್ಟಿದ್ದಾರೆ.ಅಲ್ಲಿ ಅವರು ನೀಡಿರುವ ಅರಕೆ, ಅರಿಮೆ, ಅರಿಗ ಇತ್ಯಾದಿ ಪದಗಳು ಕ್ರಮವಾಗಿ ಸಂಶೋಧನೆ,ವಿಜ್ಞಾನ ,ವಿಜ್ಞಾನಿ ಇತ್ಯಾದಿ ಪದಗಳನ್ನು ಸೂಚಿಸುತ್ತವೆ ಎಂದು ಹೇಳದಿದ್ದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ.

ಕನ್ನಡವು ಸಂಸ್ಕೃತಮಯವಾಗುತ್ತಿರುವುದರಿಂದ ೧೯೫೬ಕ್ಕಿಂತ ಹಿಂದೆ ಇದ್ದುದಕ್ಕಿಂತ ಜನರಿಂದ ದೂರವಾಗಿದೆ ಎಂದು ಡಾ.ಕೆ.ವಿ.ನಾರಾಯಣ ಹೇಳುತ್ತಾರೆ. ಈ ಹೇಳಿಕೆಗೆ ನಿಜವಾಗಿ ಯಾವುದೇ ಆಧಾರಗಳಿಲ್ಲ. ಹಾಗೆ ಕಂಡರೆ, ಕನ್ನಡದಲ್ಲಿ ಡಾ. ಭಟ್ಟರ ವಾದವು ಉಂಟುಮಾಡಬಹುದಾದ ಗೊಂದಲಕ್ಕೆ ಕೆ.ವಿ.ಎನ್. ಅವರು ತಿರುಳುಎನ್ನುವ ಪದವನ್ನು ಬಳಸುತ್ತಿರುವುದೇ ದೊಡ್ಡ ಸಾಕ್ಷಿ. ಪ್ರಜಾವಾಣಿಯ ಆದಿತ್ಯವಾರದ ಅಂಕಣದಲ್ಲಿ ಅರ್ಥಎಂಬರ್ಥದಲ್ಲಿ ಕೆ.ವಿ.ಎನ್. “ತಿರುಳುಎಂಬ ಕನ್ನಡ ಪದ ಬಳಸುತ್ತಿದ್ದಾರೆ. ಕೆ.ವಿ.ಎನ್.ಗೆ ಪ್ರೇರಣೆಯಾಗಿರಬಹುದಾದ ಡಿ.ಎನ್.ಎಸ್. ಮಾತ್ರ ತಿರುಳುಎಂದರೆ ಸಾರಾಂಶಎಂಬರ್ಥದಲ್ಲಿ ಬಳಸುತ್ತಿದ್ದಾರೆ(ಕನ್ನಡ ಬರಹ ಸರಿಪಡಿಸೋಣ). ತಿರುಳು ಎನ್ನುವುದು ಸಾರಾಂಶಕ್ಕೆ ಹೊಂದುತ್ತದೆ ಹೊರತು ಅರ್ಥಕ್ಕಲ್ಲ. ಅರ್ಥ ಎನ್ನುವುದಕ್ಕೆ ಭಟ್ಟರು ಹುರುಳುಎನ್ನುವ ಕನ್ನಡ ಪದ ಬಳಸುತ್ತಾರೆ.ಸರಳವಾಗಿರುವ ಅರ್ಥವನ್ನು ನೂಕಿ ಹುರುಳುಕೂರಬೇಕೆಂದಿಲ್ಲವಾದರೂ ಅದನ್ನು ಬಳಸುವುದರಲ್ಲಿ ತಿರುಳುಬಳಸುವುದಕ್ಕಿಂತ ಹೆಚ್ಚು ಹುರುಳಿದೆ.

ಕನ್ನಡ ಪದಗಳ ಹುಡುಕಾಟ ನಡೆಯಬೇಕು.ಕನ್ನಡ ವಿಜ್ಞಾನ ಬರಹಗಳಲ್ಲಿ ಸಂಸ್ಕೃತ ಪದಗಳು ಹೆಚ್ಚಾಗಿರುವ ಬಗ್ಗೆ ಡಿ.ಎನ್.ಎಸ್. ಆಕ್ಷೇಪಗಳು ಹಲವು ಕಡೆಗಳಲ್ಲಿ ಸರಿಯಾಗಿಯೇ ಇವೆ. ಅದೇ ಹೊತ್ತಿಗೆ , ಜಿ.ಟಿ.ನಾರಾಯಣರಾಯರು, ಅಡ್ಯನಡ್ಕ ಕೃಷ್ಣ ಭಟ್ಟ ಇವರೆಲ್ಲ ಕನ್ನಡದಲ್ಲಿ ವಿಜ್ಞಾನ ಹೇಳುವ ಮೂಲಕ ಕನ್ನಡದ ಸಾಧ್ಯತೆಗಳನ್ನು ವಿಸ್ತರಿದರು ಎನ್ನುವುದನ್ನು ಮರೆಯಬಾರದು.ಅಲ್ಲದೆ ಇಂಥ ವಿಜ್ಞಾನ ಪಾರಿಭಾಷಿಕಗಳನ್ನು ರಚಿಸುವಾಗ ಅಖಿಲಭಾರತ ಮಟ್ಟದಲ್ಲಿ ಸಂವಹನ ಸಾಧ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಂಸ್ಕೃತಮೂಲದ ಪದಗಳನ್ನು ಅವರೆಲ್ಲ ಸ್ವಲ್ಪ ಹೆಚ್ಚು ಬಳಸಿದ್ದಾರೆ.ಆದರೆ ಅದಕ್ಕೆ ಪ್ರತಿಯಾಗಿ ಡಿ.ಎನ್.ಎಸ್. ಹೇಳುವ ಪ್ರಯೋಗಗಳೂ ಪರಿಪೂರ್ಣವಲ್ಲ.”ನಾಕ್ಷತ್ರಿಕ ಕಾಲಎನ್ನುವುದನ್ನು ನಕ್ಷತ್ರದ ಕಾಲಎನ್ನುತ್ತಾರೆ ಡಿ.ಎನ್.ಎಸ್. ಹಾಗೆಯೇ , “ಶಾಬ್ದಿಕ ಪ್ರತಿಬಿಂಬವನ್ನು ಶಬ್ದದ ಪ್ರತಿಬಿಂಬಎನ್ನಬೇಕೆನ್ನುತ್ತಾರೆ.”ಬಹುಫಲಕವನ್ನು ಹಲಬದಿಎನ್ನುತ್ತಾರೆ. ಇಲ್ಲೆಲ್ಲ ಡಿ.ಎನ್.ಎಸ್. ನೀಡುವ ಪರ್ಯಾಯಗಳು ಹೊಂದುವುದಿಲ್ಲ. ಶಾಸ್ತ್ರಸಂಬಂಧೀ ವಿಚಾರಗಳನ್ನು ಬರೆಯುವಾಗ ಶುದ್ಧಪ್ರಾಚೀನ ಕನ್ನಡ ಪದಗಳನ್ನು ಬಳಸಿದರೂ ಹೊಸದಾಗಿ ಟಂಕಿಸಿದರೂ ಅವುಗಳಿಗೆ ಅರ್ಥವಿವರಣೆ ನೀಡಬೇಕಾದ ಅನಿವಾರ್ಯತೆಯಿರುತ್ತದೆ.

ಕನ್ನಡದ್ದೇ ಪದಗಳನ್ನು ಉಳಿಸುವ ಬೆಳೆಸುವ ಅವಕಾಶಗಳು ಹೆಚ್ಚಾಗಿರುವುದು ಕಾವ್ಯ, ನಾಟಕ, ಕತೆ, ಕಾದಂಬರಿಗಳಂತಹ ಬರಹಗಳಲ್ಲಿ. ಹೇಗಿದ್ದರೂ ಹೆಚ್ಚಿನ ಸಂಖ್ಯೆಯ ಓದುಗರು ಮತ್ತು ಬರಹಗಾರರು ಇರುವುದು ಈ ಪ್ರಕಾರಗಳಿಗೇ ಹೊರತು ವಿಮರ್ಶೆ, ವಿಶ್ಲೇಷಣೆ, ವಿವಿಧ ವೈಚಾರಿಕ ಅಥವಾ ಶಾಸ್ತ್ರವಿಷಯಗಳ ಮೇಲಿನ ಬರಹಗಳಿಗಲ್ಲ. ಕತೆಕಾವ್ಯಗಳಂಥ ಸೃಜನಶೀಲ ಬರಹಗಳು ಕನ್ನಡದ ವಿವಿಧ ಪ್ರಭೇದಗಳಲ್ಲಿರಬಹುದಾದ ವಿಶಿಷ್ಟ ಅರ್ಥಗಳ ಪದಗಳನ್ನು ಉಳಿಸಿ ಬೆಳೆಸುವಲ್ಲಿ ಕೆಲಸ ಮಾಡಬಹುದಾದಷ್ಟು ಪ್ರಮಾಣದಲ್ಲಿ ಶಾಸ್ತ್ರ ಬರಹಗಳು ಮಾಡಲಾರವು. ಇಂದು ಕನ್ನಡದ ಕತೆ, ಕಾದಂಬರಿಗಳಲ್ಲಿ ದಲಿತರ ಭಾಷೆ, ಕುಂದಾಪುರ ಭಾಷೆ,ಉತ್ತರಕರ್ನಾಟಕದ ಕನ್ನಡ ಮೊದಲಾದ ಅನೇಕ ಪ್ರಭೇದಗಳಲ್ಲಿರುವ ಪದಗಳೂ ವಾಕ್ಯರಚನೆಗಳೂ ಬಳಕೆಯಾಗುತ್ತಿವೆ. ಮಾನ್ಯತೆ ಪಡೆದಿವೆ. ಅಲ್ಲಿ ಎಲ್ಲೂ ಅಲ್ಪಪ್ರಾಣ ಮಹಾಪ್ರಾಣಗಳ ಕುರಿತ ಸರಿತಪ್ಪುಗಳ ಪ್ರಶ್ನೆಯಿಲ್ಲ. ತುಳು ಭಾಷೆಯ ವಿಚಾರವಾಗಿ ಕೂಡ ಇದೇ ಮಾತನ್ನು ಹೇಳಬಹುದು. ತುಳು ಭಾಷೆಯ ಕಾದಂಬರಿಗಳನ್ನು ಗಮನಿಸಿದರೆ ಅಲ್ಲಿ ಹೆಚ್ಚು ಕನ್ನಡ ಅಥವಾ ಸಂಸ್ಕ್ರೂತಮೂಲದ ಪದಗಳು ಕಾಣಿಸಲಾರವು. ಅದೇ ನೀವು ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ತುಳುವಿನಲ್ಲಿ ಇಂದು ಬರೆಯಲಾಗುತ್ತಿರುವ ಲೇಖನಗಳನ್ನು ಗಮನಿಸಿದರೆ ಅಲ್ಲಿ ಕನ್ನಡ ಅಥವಾ ಸಂಸ್ಕೃತಮೂಲದ ಪದಗಳು ಅನಿವಾರ್ಯವಾಗಿ ಬಳಕೆಯಾದುದನ್ನು ಕಾಣುತ್ತೀರಿ.

ಡಾ.ಶಂಕರ ಭಟ್ಟರು ಹೇಳುವ ಸುಧಾರಣೆಗಳ ಪರಿಣಾಮವಾಗಿ ಕೇವಲ ಹೊಸ ಬರಹವನ್ನು (ಅಥವಾ ಹೊಸಕನ್ನಡವನ್ನು) ಕಲಿತ ವಿದ್ಯಾವಂತರು, ಕನ್ನಡದಲ್ಲಿ ವಿವಿಧ ಜ್ಞಾನಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೊಸ ವಿಚಾರಗಳನ್ನು ಸೃಷ್ಟಿಸುವ ಸಾಧ್ಯತೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.ಅಕ್ಷರಸ್ಥರಾಗುವುದರ ಅಂತಿಮ ಉದ್ದೇಶ ಕೇವಲ ಈಗಾಗಲೇ ಇರುವ ಸಾಹಿತ್ಯವನ್ನು ಓದುವುದು ಅಥವಾ ಅರ್ಥ ಮಾಡಿಕೊಳ್ಳುವುದಲ್ಲ. ಹೊಸತನ್ನು ಹೇಳುವುದು ,ಬರೆಯುವುದು ಗುರಿಯಾಗಬೇಕು. ಅದು ಹಾಗೆ ಆಗದಿರುವುದರಿಂದಲೇ ಇಂದು ಇಂಗ್ಲಿಷಿನೆದುರು ಕನ್ನಡ ಹಿಂದುಳಿದದ್ದು ಅಥವಾ ಇದನ್ನೇ ವಿಸ್ತರಿಸಿ ಹೇಳುವುದಾದರೆ, ಕನ್ನಡದಲ್ಲೇ ಕೆಲವರ್ಗಗಳು ಮುಂದಿದ್ದು ಇನ್ನು ಕೆಲವರ್ಗಗಳು ಹಿಂದಿರಲು ಕೂಡ ಇದೇ ಕಾರಣವಾಗಿರಬಹುದು.

************

 ಕೊನೆಬೆಡಿ;

 ಬೆಡಿಯಲ್ಲಿರುವ ಮದ್ದು ಹಳತಾದರೆ ಬೆಡಿ ಠುಸ್ ಆಗುತ್ತದೆ ಅಂತ ಗೊತ್ತಿಲ್ಲವೇ ನಿಮಗೆ?

ಕೋಮುವಾದವೂ ಮೂಲಭೂತವಾದವೂ

ಮಾರ್ಚ್ 4, 2010

ಕೋಮುವಾದವೂ ಮೂಲಭೂತವಾದವೂ

ದಕ್ಷಿಣ ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಹಿಂದೂಮುಸ್ಲಿಂ ಸಂಘರ್ಷಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಲೇಖನಗಳು ಕಾಲಕಾಲಕ್ಕೆ ವಿವಿಧ ಪತ್ರಿಕೆಗಳಲ್ಲಿ ಬಂದಿವೆ. ಪುಸ್ತಕಗಳೂ ಬಂದಿವೆ. ಆದರೆ , ಹೆಚ್ಚಿನ ಲೇಖನಗಳು ಸಮಸ್ಯೆಯ ಆಳಕ್ಕಿಳಿದು ಚರ್ಚಿಸುವುದಿಲ್ಲ. ಮೇಲು ಮೇಲಿಂದ ನೊಡಿ ಎಲ್ಲ ಕೋಮುವಾದಿಗಳನ್ನು ಖಂಡಿಸಬೇಕು ಎಂದು ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗದು.

ವಾಸ್ತವವಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳು ಬದುಕನ್ನು ಗ್ರಹಿಸುವ ಬಗೆಯಲ್ಲಿಯೇ ವ್ಯತ್ಯಾಸಗಳಿವೆ.

ಹಿಂದೂ ಎಂಬೊಂದು ಏಕರೂಪಿ ಘಟಕ ಇಲ್ಲ ನಿಜ. ಆದರೆ ಸೃಷ್ಟಿ ಮತ್ತು ಸೃಷ್ಟಿಕರ್ತ ಇವೆಲ್ಲ ಪೂಜನೀಯ ಎಂದು ಗ್ರಹಿಸುವ ,ಅಂಥ ನಂಬಿಕೆಗಳನ್ನು ಹೊಂದಿರುವುದೇ ಈ ಹಿಂದುಎಂದು ನಾವು ಅನುಕೂಲಕ್ಕಾಗಿ ಕರೆಯುವ ಗುಂಪುಗಳ ನಡುವೆ ಇರುವ ಸಾಮ್ಯತೆ ಎನ್ನಬಹುದು. ಇಂಥ ನಂಬಿಕೆಗಳು ಬಹುಸಂಸ್ಕೃತಿಗಳ ಅಸ್ತಿತ್ವಕ್ಕೆ ಪೂರಕ ಎಂದು ಬೇರೆ ಹೇಳಬೇಕಾಗಿಲ್ಲ. ಹಿಂದೂ ಧರ್ಮಗಳ ಒಳಗೇ ಭೇದಭಾವ ಇತ್ಯಾದಿ ಸಮಸ್ಯೆಗಳಿವೆ.ಅದು ಸಾಕಷ್ಟು ಚರ್ಚಿತವಾದ ವಿಷಯವೇ ಆಗಿದೆ.

ವಾಸ್ತವವಾಗಿ ಹಿಂದೂಮುಸ್ಲಿಂ ಸಂಘರ್ಷವೆಂದರೆ ಅದು ಆಧುನಿಕತೆಗೆ ತೆರೆದುಕೊಂಡ ಮತ್ತು ಹಾಗೆ ತೆರೆದುಕೊಳ್ಳಲು ಹಿಂಜರಿಯುವ ಸಂಸ್ಕೃತಿಗಳ ನಡುವಿನ ಸಂಘರ್ಷವೂ ಹೌದು.ಅವರವರು ಅವರವರಷ್ಟಕ್ಕೇ ಇರಲಿ ಏನು ಸಮಸ್ಯೆ ಎನ್ನಲು ಸಾಧ್ಯವಿಲ್ಲ ಯಾಕೆಂದರೆ ಇವೆರಡೂ ಸಂಸ್ಕೃತಿಗಳೂ ಒಟ್ಟಿಗೇ ಬದುಕಬೇಕಾಗಿದೆ ಇಲ್ಲಿ.

ದಕ್ಷಿಣ ಕನ್ನಡದಲ್ಲಿ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗಜತೆಯಾಗಿ ಬಸ್ಸಲ್ಲಿ ಪ್ರಯಾಣಿಸಿದರೆ ಅಥವಾ ಪರಸ್ಪರ ಮಾತನಾಡಿದರೆ ಹಲ್ಲೆಗೆ ಒಳಗಾಗುವ ಪ್ರಸಂಗಗಳು ವರದಿಯಾಗುತ್ತವೆ.ಇಂಥ ಹಲ್ಲೆಗಳು ಖಂಡನೀಯವೇ ಹೌದು. ಇದರ ಹಿಂದೆ ಪುರುಷಾಹಂಕಾರದ ಪ್ರವೃತ್ತಿ ಇದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ. ಆದರೆ ಇಂಥ ಪ್ರಸಂಗಗಳ ಬಗ್ಗೆ ಚಿಂತಿಸುವಾಗ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮಂಗಳೂರಿನ ಕುಪ್ರಸಿದ್ಧ ಪಬ್ ದಾಳಿಯ ನಂತರ ಮಂಗಳೂರು ಹೇಗೆ ಕೋಮುವಾದಿಗಳ ತಾಣವಾಗುತ್ತಿದೆ ಎನ್ನುವ ಲೇಖನ ದ ವೀಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ( ಎನ್, ಭಾನುತೇಜ್, ವೀಕ್, ಫೆಬ್ರವರಿ ೨೦೦೯). ಎಲ್ಲ ಸರಿ; ಆದರೆ ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.”ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿಯರ ನಡುವಿನ ಸ್ನೇಹಕ್ಕೆ ಗರಿಷ್ಟ ಶಿಕ್ಷೆ. ಹಿಂದು ಹುಡುಗಮುಸ್ಲಿಂ ಹುಡುಗಿ ಸ್ನೇಹದ ವಿರುದ್ಧ ಯಾವುದೇ ಅಟ್ಯಾಕ್ ಆದ ಬಗ್ಗೆ ವರದಿಗಳಿಲ್ಲ.”(ಪು.೧೬). ಈ ಹೇಳಿಕೆ ನಿಜವಾಗಿ ಮಿಸ್ ಲೀಡ್ ಮಾಡುವಂಥದ್ದು. ..ದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಝತೆಯಾಗಿ ಓಡಾಡುವ ಸನ್ನಿವೇಶಗಳು ಇಲ್ಲವೆಂಬಷ್ಟು ಕಡಮೆ ಎನ್ನುವ ಸತ್ಯವನ್ನು ಈ ಹೇಳಿಕೆ ಮರೆಮಾಚುತ್ತದೆ. ಹಾಗೆ ಓಡಾಡುವ ಸನ್ನಿವೇಶಗಳು ಇರುತ್ತಿದ್ದರೆ ಈಗಿನ ರೀತಿಯ ಗಲಾಟೆಗಳು ಇರುತ್ತಿರಲಿಲ್ಲ ಎಂದು ಅನಿಸುತ್ತದೆ.ಅಂದರೆ ಆಧುನೀಕರಣಗೊಳ್ಳುವ ಪ್ರಕ್ರಿಯೆಯಲ್ಲಿಯೇ ಹಿಂದು ಮತ್ತು ಮುಸ್ಲಿಮರ ನಡುವೆ ಅಸಮತೋಲನವಿದೆ. ಆಧುನಿಕ ಶಿಕ್ಷಣದ ಕಾರಣದಿಂದ ಹೀಮ್ದುಗಳಲ್ಲಿ ಪುರುಷ ಪ್ರಾಧಾನ್ಯ ಕಡಿಮೆಯಾಗಿದ್ದರೆ ಮುಸ್ಲಿಮರಲ್ಲಿ ಅಷ್ಟರಮಟ್ಟಿಗೆ ಕಡಿಮೆಯಾಗಿಲ್ಲ. ಎಲ್ಲರೂ ಆಧುನೀಕರಣಗೊಳ್ಳುವುದರಿಂದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ನಾನೇನೂ ಹೇಳುತ್ತಿಲ್ಲ.

ಚುನಾವಣಾ ಗುರುತುಚೀಟಿಗಾಗಿ ನಾವು ಫೋಟೊ ತೆಗೆಸಿಕೊಳ್ಳುವಂತಿಲ್ಲ ಎಂದು ಯಾರೋ ಕೋರ್ಟಿಗೆ ಹೋದಾಗ ಆ ಕೇಸು ಎಡ್ಮಿಟ್ ಆದುದೇ ಅಚ್ಚರಿ. ಬುರ್ಖಾ ಧರಿಸುವುದು ಮಾನವಹಕ್ಕು ನಿಜ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವ್ಯಕ್ತಿಗಳು ಗುರುತುಸಿಗದಂತೆ ಇರಬೇಕೆನ್ನುವುದು ಅಪೇಕ್ಷಣೀಯವೇ?

ಇಸ್ಲಾಮ್ ಧರ್ಮದ ಬುದ್ಧಿಜೀವಿಗಳ ಒಂದು ವೈಶಿಷ್ಟ್ಯ ಎಂದರೆ ಅವರು ಮುಸ್ಲಿಮರ ಕೆಲವು ಧಾರ್ಮಿಕ ಆಚರಣೆಗಳನ್ನು ಟೀಕಿಸುತ್ತಾರಷ್ಟೆ ಹೊರತು ಧರ್ಮದ ಅಥವಾ ಗ್ರಂಥಗಳ ವಿಮರ್ಶೆ ಮಾಡುವುದಿಲ್ಲ. ” ಕನ್ನಡ ಮುಸ್ಲಿಮ್ ಲೇಖಕರು ತಮ್ಮ ಸಮಾಜವನ್ನು ವಿಮರ್ಶಿಸಿದರು,ಪಾವಿತ್ರ್ಯನಾಶ ಮಾಡುವ ಪ್ರಗತಿಪರ ನಿಲುವನ್ನು ತೋರಿದರು ಎಂದೆಲ್ಲ ಅಭಿಪ್ರಾಯಗಳು ಕನ್ನಡ ವಿಮರ್ಶಾವಲಯದಲ್ಲಿ ಚಾಲ್ತಿಯಲ್ಲಿದೆ. ಸಾರಾ ಅಬೂಬಕರ್ ಸೇರಿದಂತೆ ಎಲ್ಲರೂ ಹೇಳುವುದು ಹೇಗೆಂದರೆ ಹೀಗೆ ಕುರಾನ್ ನಲ್ಲಿ ಹೇಳಿಲ್ಲ .ಆದ್ದರಿಂದ ನಾವು ಅದನ್ನು ಆಚರಿಸಬೇಕಾಗಿಲ್ಲಇತ್ಯಾದಿ ನಮೂನೆಯಲ್ಲಿ. ” ಕುರಾನ್ ನಲ್ಲಿ ಹೀಗೆ ಹೇಳಿದೆ ಆದರೆ ಇಂದು ಅದು ಪ್ರಸ್ತುತವಲ್ಲ ನಾವು ಕುರಾನ್ ನಲ್ಲಿ ಹೇಳಿದಂತೆ ಆಚರಿಸಬೇಕಾಗಿಲ್ಲಅಂತ ಈ ಯಾವ ಲೇಖಕರೂ ಹೇಳುವುದಿಲ್ಲ. ಈ ಸ್ವಾತಂತ್ರ್ಯ ಯಾಕಿಲ್ಲ ಎಂದು ನಾವೆಲ್ಲ ಕೇಳಿಕೊಳ್ಳಬೇಕಾಗಿದೆ.(ಈ ಅರ್ಥದ ಕಮೆಂಟ್ ಒಂದನ್ನು ಕಟ್ಪಾಡಿಯವರ ಲೇಖನಕ್ಕೆ ಬರೆದದ್ದು ನಾನೇ. ಅವಸರದಲ್ಲಿ ಹೆಸರು ಕುಟ್ಟುವ ಮೊದಲೇ ಸಬ್ಮಿಟ್ ಒತ್ತಿಬಿಟ್ಟಿದ್ದೆ.ಕ್ಷಮಿಸಿ.). ಇದರ ಒಂದು ಪರೋಕ್ಷ ಪರಿಣಾಮವೆಂದರೆ ಹಿಂದು ಧರ್ಮ ಕೂಡ ವಿಮರ್ಶಾತೀತವೆಂಬ ಮನೋಭಾವ ಬೆಳೆಯುತ್ತಿರುವುದು. ಹುಸೇನರಂಥವರು ಹೆದರಬೇಕಾಗಿಬರುವುದು. ಆದರೆ ಹಿಂದುಗಳಲ್ಲಿ ಬಹುಸಂಖ್ಯಾತರು ಈಧೋರಣೆಯನ್ನು ಹೊಂದಿಲ್ಲ ಎನ್ನುವುದನ್ನೂ ಗಮನಿಸಬೇಕು. ವಿಮರ್ಶೆಗೆ ಹಿಂದು ಧರ್ಮ ಮತ್ತು ಅದರ ಗ್ರಂಥಗಳು ತೆರೆದುಕೊಂಡಿವೆ ಎಂದೇ ಬಹುಸಂಖ್ಯಾತ ಹಿಂದುಗಳು ಸರಿಯಾಗಿಯೇ ಒಪ್ಪುತ್ತಾರೆ.

ಮುಸ್ಲಿಮ್ ಬುದ್ಧಿಜೀವಿ ಎಂದೇ ಪ್ರಸಿದ್ಧರಾದ ಜಿಯವುದ್ದೀನ್ ಸರ್ದಾರ್ ಹೇಳುವ ಈ ಮಾತುಗಳನ್ನು ಗಮನಿಸಿ.”ಇಸ್ಲಾಮ್ ಗಿವ್ಸ್ ಫುಲ್ ಫ್ರೀಡಮ್ ಅಫ್ ರೇಶನಲ್ ಆಂಡ್ ಇಂಟಲ್ಲೆಕ್ಚುವಲ್ ಎನ್ಕ್ವಯರಿ ವಿತಿನ್ ದ ಸರ್ಕಂಫರೆನ್ಸ್ ಅಫ್ ಇಟ್ಸ್ ನಾರ್ಮ್ಸ್ ಅಂಡ್ ವ್ಯಾಲ್ಯೂಸ್” (ಅಕ್ಬರ್ ಅಹ್ಮದ್ ಸಂ.ಟು ಮುಸ್ಲಿಮ್ ಇಂತಲ್ಲೆಕ್ಚುವಲ್ಸ್ ಇನ್ ದ ಪೋಸ್ಟ್ ಮಾಡರ್ನ್ ವೆಸ್ಟ್, ಪು. ೧೯೭) ಪೂರ್ಣ ಸ್ವತಂತ್ರ್ಯವಿರುವುದು ಧರ್ಮದ ಪರಿಧಿಯ ಒಳಗೆ ಎನ್ನುವುದನ್ನು ಗಮನಿಸಿ.

ಕೆಲವು ವಿದ್ವಾಂಸರು ಮೂಲಭೂತವಾದ ಮತ್ತು ಕೋಮುವಾದ ಇವುಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಎರಡನೆಯದು ಮೊದಲನೆಯದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸುವುದುಂಟು. ಮುಸ್ಲಿಮರದು ಮೂಲಭೂತವಾದ ; ಹಿಂದುಗಳದು ಕೋಮುವಾದ ಎಂಬ ಗ್ರಹಿಕೆ. ಅನಂತಮೂರ್ತಿಯವರು ಎಲ್ಲೋ ಹೇಳಿದ್ದು ನೆನಪು.” ಮುಸ್ಲಿಮರ ಮೂಲಭೂತವಾದದಿಂದ ಅವರು ನಾಶವಾಗುತ್ತಾರೆ; ಹಿಂದುಗಳ ಕೋಮುವಾದದಿಂದ ದೇಶವೇ ಸರ್ವನಾಶವಾಗುತ್ತದೆ ಎಂಬರ್ಥದಲ್ಲಿ. ಇದು ಪೂರ್ತಿ ಸರಿಯಲ್ಲ. ಇಲ್ಲಿ ಮೂಲಭೂತವಾದವೆನ್ನುವುದು ಐಸೋಲೇಟೆಡ್ ಆಗಿ ಇರಲು ಸಾಧ್ಯವಿಲ್ಲ. ಒಟ್ಟಿಗೇ ಬದುಕುವಾಗ ಅದರ ಪರಿಣಾಮ ಇನ್ನೊಬ್ಬನ ಮೇಲೂ ಆಗಿಯೇ ಆಗುತ್ತದೆ. ತರೀಕೆರೆಯವರೂ ಇಂಥದೇ ವ್ಯತ್ಯಾಸವನ್ನು ಮಾಡುತ್ತಾರೆನಿಸುತ್ತದೆ. ಇಲ್ಲ ಅಂತಾದರೆ ತಿದ್ದಿಕೊಳ್ಳಲು ತಯಾರಿದ್ದೇನೆ.

ಮುಸ್ಲಿಮರು ಹೆಚ್ಚು ಕರ್ಮಠರಾಗುವುದಕ್ಕೆ ಹಿಂದುತ್ವವಾದವೇ ಕಾರಣ ;ಬಾಬ್ರಿ ಮಸೀದಿ ಬೀಳಿಸಿದ್ದೇ ಕಾರಣ ಎನ್ನುವ ಪೊಪ್ಯುಲರ್ ನಂಬಿಕೆಯೊಂದಿದೆ.ಇದು ಕೂಡ ಸರಳೀಕರಣ. ವಾಸ್ತವವಾಗಿ ಬೆಹ್ರೆನ್ ಇಂಡೋನೇಶಿಯಗಳಂಥ ದೇಶಗಳಲ್ಲೂ ಮುಸ್ಲಿಮರು ಹೆಚ್ಚು ಕರ್ಮಠರಾಗುತ್ತಿದ್ದಾರೆ. ಪಾಕಿಸ್ತನ ತಾಲಿಬಾನ್ ಇತ್ಯಾದಿ ಹೇಗೂ ಇವೆಯಲ್ಲ? ಈಚೆಗೆ ಕರ್ಮಠತೆ ಹೆಚ್ಚಾಗುತ್ತಿರುವುದು ಧರ್ಮಗಳಲ್ಲಿಒಂದು ಜಾಗತಿಕ ವಿದ್ಯಮಾನವೋ ಏನೋ? ಜಾಗತಿಕ ಧರ್ಮವಾದ ಇಸ್ಲಾಮಿನಲ್ಲಿ ಇದು ಬಹುಶಃ ಹೆಚ್ಚಾಗಿ ಕಂಡರೆ ಅಚ್ಚರಿಯಿಲ್ಲ. ಗಲ್ಫ್ ದೇಶಗಳಲ್ಲಿ ಉದ್ಯೋಗ, ಅಲ್ಲಿ ಉಪವಾಸ ಮಾಸದಲ್ಲಿ ಬಹಿರಂಗವಾಗಿ ಆಹಾರ ಸೇವಿಸಲು ಅವಕಾಶ ಇಲ್ಲದಿರುವುದು,ಇತ್ಯಾದಿ ಸಮ್ಗತಿಗಳನ್ನು ಕಡೆಗಣಿಸಿ ಹಿಂದುತ್ವವಾದವನ್ನು ಕೇಂದ್ರೀಕರಿಸಿ ನಡೆಸುವ ವಿಶ್ಲೇಷಣೆಗಳು ಮೇಲುಸ್ತರದ ವಿಶ್ಲೇಷಣೆಗಳೇ ಆಗುತ್ತವೆ. ..ವೇನೂ ನಿರ್ವಾತದಲ್ಲಿಲ್ಲ.ಕರಾವಳಿಯ ಹಿಂದುಗಳಿಗೂ ಮುಸ್ಲಿಮರಿಗೂ ಇಸ್ಲಮ್ ರಾಷ್ಟ್ರಗಳ ಸಂಪರ್ಕ ಹೆಚ್ಚು.ಅದು ಇಬ್ಬರ ಮೇಲೂ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರದೇ ಇರಲು ಸಾಧ್ಯವಿಲ್ಲ.

ಕೊನೆಬೆಡಿ:

ಕನ್ನಡಕ ಹಾಕದಿದ್ದರೆ ಕಣ್ಣು ಕಾಣುವುದಿಲ್ಲ. ಹಾಕಿದರೆ ಕನ್ನಡಕ ತೋರಿಸಿದ್ದೇ ಕಾಣುವುದು.  

 

ಇವನ್ಹಾರವ ಇವನ್ಹಾರವ-ವಚನ

ಫೆಬ್ರವರಿ 15, 2010

 ವಚನಗಳ ಒಂದು ಓದು

ವಚನಗಳು ನಿತ್ಯನೂತನವೆಂದು ಅನಿಸುವುದು ಯಾಕೆಂದರ

,ಅವುಗಳನ್ನು ನಮ್ಮ ನಮ್ಮ ಅನುಭವ ಬೆಳೆದಂತೆಲ್ಲಾ ಹೊಸ ಹೊಸ ಅರ್ಥಗಳೊಂದಿಗೆ ಓದಬಹುದು.ಹಾಗಾಗಿಯೇ ನಾಲ್ಕನೇ ಕ್ಲಾಸಿನಿಂದ ಹಿಡಿದು ಎಮ್. .ಅಥವಾ ಪಿಹೆಚ್.ಡಿ. ವರೆಗೂ ವಚನಗಳನ್ನು ಅಧ್ಯಯನಮಾಡುತ್ತೇವೆ.

.ಎಲ್. ನಾಗಭೂಷಣಸ್ವಾಮಿಯವರು ವಚನ ಸಾವಿರಎಂಬ ತಮ್ಮ ಪುಸ್ತಕದಲ್ಲಿ (ಪು. ೧೦) ಹೀಗೆ ಹೇಳುತ್ತಾರೆ: “ಅರ್ಥ ಗೊತ್ತಿದೆ, ಸುಸ್ಪಷ್ಟವಾಗಿದೆ ಎಂದೇ ಭಾವಿಸಿ ನಾವು ವಚನಗಳು ಒಳಗೊಂಡಿರುವ ಅನುಭವಕ್ಕೆ ಮುಚ್ಚಿದ ಮನಸ್ಸಿನವರಾಗಿ ಬಿಡುತ್ತೇವೆ. ಪರಿಚಿತವಾದದ್ದನ್ನೂ ಅಪರಿಚಿತಗೊಳಿಸಿಕೊಳ್ಳದ ಹೊರತು ಓದಿನ ಹೊಸತನ ಸಾಧ್ಯವಾಗುವುದಿಲ್ಲ.” ಸದ್ಯಕ್ಕೆ

,ಎಲ್ಲರೂ ಒಂದು ರೀತಿಯಲ್ಲಿ ಅರ್ಥ ಮಾಡಿಕೊಂಡ ಮತ್ತು ನಾನು ಬೇರೆ ರೀತಿ ಅರ್ಥ ಮಾಡಿಕೊಂಡ, ಬಸವಣ್ಣನವರ ಒಂದು ವಚನದ ಕಡೆ ಗಮನ ಹರಿಸಬಹುದು. ಆ ವಚನ ಹೀಗಿದೆ.ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ

ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ

ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ

ಈ ವಚನವನ್ನು ಈವರೆಗೆ ಕನ್ನಡ ಬರಹಗಳಲ್ಲಿ ಈವರೆಗೆ ಅರ್ಥ ಮಾಡಿದ ಪ್ರಕಾರ ಬಸವಣ್ಣನವರು ಇಲ್ಲಿ

ಈತನು ಯಾರು? ಯಾರು? ಎಂದು ಕೇಳಿ ದೂರ ಮಾಡದಿರಿಎನ್ನುತ್ತಿದ್ದಾರೆ.(ನೋಡಿ:ಎನ್. ಜಿ.ನಾಡಗೌಡರ, ಶ್ರೀ ಬಸವಣ್ಣನವರ ವಚನಗಳು, ಪು.೧೧,) ಒಂದು ಪರಕೀಯ ಭಾವನೆಯಿಂದಲೇ ಈ ವಚನವನ್ನು ಹೇಳಲಾಗಿದೆಯೆಂಬುದು ನಿಜ. ಈಗ, ಸಾಮಾಜಿಕ ಸಂಗತಿಗಳನ್ನು ಚರ್ಚಿಸುವಾಗಲೆಲ್ಲ ಈ ವಚನವನ್ನು ಉದ್ಧರಿಸುವುದು ತುಂಬ ಸಾಮಾನ್ಯವಾಗಿದೆ. ಸಾಮಾಜಿಕ ಸಮಾನತೆಯ ಹಂಬಲ ಬಸವಣ್ಣರಿಗೆ ಮುಖ್ಯವಾಗಿದ್ದುದರಿಂದ ಅವರ ವಚನಗಳಲ್ಲಿ ಜಾತಿ ಪ್ರಶ್ನೆಗಳು ಅಲ್ಲಲ್ಲಿ ಬರುತ್ತವೆ. ಈ ಬಗ್ಗೆ ಬೇಕಾದಷ್ಟು ಚರ್ಚೆಗಳು ನಡೆದಿವೆ. ಬಂಜಗೆರೆಯವರ ಆನು ದೇವಾಪುಸ್ತಕ ಬಂದ ನಂತರವಂತೂ ಬಹಳ ವಾದ ವಿವಾದಗಳಾಗಿವೆ. ಆದರೆ ಇವನಾರವ ಎಂಬಲ್ಲಿ ಬಸವಣ್ಣನವರು ಹಾರವಎನ್ನುತ್ತಿದ್ದಾರೆ ಎಂಬ ಕಡೆಗೆ ಯಾರೂ ಗಮನ ಹರಿಸಿಲ್ಲ.ಬೇರೆ ಬರಹಗಳಲ್ಲಿ ಮಾತ್ರವಲ್ಲ; ಬಸವಣ್ಣನವರ ಜಾತಿ ಕುರಿತ ವಚನಗಳ ವಿಶ್ಲೇಷಣೆಯಲ್ಲೂ ಈ ವಚನವನ್ನು ಹಾರವನ ಪ್ರಶ್ನೆಯಾಗಿ ಪರಿಗಣಿಸಿಲ್ಲ.ಲತಾ ಮೈಸೂರು ಅವರು ಮೇಲಾಗಲೊಲ್ಲೆನುಎಂಬ ಬಸವಣ್ಣ ತನ್ನ ಜಾತಿ ಬಗ್ಗೆ ಹೇಳಿಕೊಂಡ ವಚನಗಳ ಒಂದು ಪಟ್ಟಿ ಮಾಡಿದ್ದಾರೆ.ಅಲ್ಲಿ ಈ ವಚನ ಇಲ್ಲ. ಆದರೆ ಈ ವಚನವನ್ನು ಸೂಕ್ಷ್ಮವಾಗಿ ನೋಡಿದರೆ ಬಸವಣ್ಣನವರು ಇವನು ಹಾರವನೆಂದು ಕೆಳಜಾತಿಯವರು ನನ್ನನ್ನು ದೂರ ಮಾಡದಿರುವಂತೆ ಮಾಡು ಎಂದು ಕೂಡಲಸಂಗಮನಲ್ಲಿ ಬೇಡುತ್ತಿದ್ದಾರೆಂದು ಗೊತ್ತಾಗುತ್ತದೆ. ಇದನ್ನು ಭಾಷಾಪ್ರಯೋಗದ ಆಧಾರದಲ್ಲೂ ಹೇಳಬಹುದು.

ಯಾರು ಎಂಬರ್ಥದಲ್ಲಿ ಹಿಂದೆಆರ್ಗೆಎಂಬ ಪ್ರಯೋಗ ಇತ್ತೇ ಹೊರತು ಆರವಎಂಬ ಪ್ರಯೋಗ ಇದ್ದಂತಿಲ್ಲ.” ತಾನಾರೆಂಬುದು ಸಾಧಿಸಲು ಬಾರದುಎನ್ನುವ ಸಾಲು ವಚನದಲ್ಲೇ ಬರುತ್ತದೆ. ವಚನಗಳಲ್ಲೆಲ್ಲ ಹೆಚ್ಚಾಗಿ ಬ್ರಾಹ್ಮಣ ಎಂಬುದಕ್ಕೆ ಹಾರವ ಅಥವಾ ಹಾರುವ ಎಂದೇ ಬಳಕೆ ಜಾಸ್ತಿ. “ಬ್ರಾಹ್ಮಣ“, “ವಿಪ್ರಇತ್ಯಾದಿ ಪದಗಳು ಇಲ್ಲ ಎಂದಲ್ಲ. ಆದರೆ ಹೋಲಿಸಿದರೆ ತುಂಬ ಕಡಿಮೆ.ಬಸವಣ್ಣನವರಲ್ಲಂತೂ ಹಾರುವ ಪದೇ ಪದೇ ಬರುತ್ತದೆ. ಅದರಲ್ಲು ತನ್ನ ಜಾತಿ ಬಗ್ಗೆ ಹೇಳುವಾಗೆಲ್ಲ ಹಾರುವ ಅಂತಲೇ ಹೇಳುತ್ತಾರೆ.(“ಆನು ಹಾರುವನೆಂದರೆ ಕೂಡಲಸಂಗಯ್ಯ ನಗುವನಯ್ಯಾ“,) ಹೀಗಾಗಿ ಮೇಲಿನ ವಚನ

ಕಷ್ಟಜಾತಿ ಜನ್ಮದಲ್ಲಿ ಜನಿಸಿದೆ ಎನ್ನಎನ್ನುವ ವಚನದ ಆಶಯವನ್ನೇ ಹೊಂದಿದೆ. ಬಸವಣ್ಣರ ಬ್ರಾಹ್ಮಣ್ಯದ ಪಾಪಪ್ರಜ್ಞೆಯೇ ಇಲ್ಲಿ ಕೆಲಸ ಮಾಡಿದೆ. ಆದ್ದರಿಂದ ನಾನು ಈ ವಚನವನ್ನು ಹೀಗೆ ಓದಬಹುದೆಂದುಕೊಳ್ಳುತ್ತೇನೆ

. ಇವನ್ಹಾರವ ಇವನ್ಹಾರವ

ನ್ಹಾರವ ಎಂದೆನಿಸದಿರಯ್ಯಾ

ಕೊನೆಬೆಡಿ

ನಾನು ಕನ್ನಡಿ ನೋಡುವುದಿಲ್ಲ ,ಯಾಕೆಂದರೆ ನನ್ನ ಮುಖವಾಡವೇ ಕಂಡೀತೆಂಬ ಭಯ.